ಕುಮಟಾ: `ಚತುಷ್ಪಥ ಹೆದ್ದಾರಿ ನಿರ್ಮಾಣ ಯೋಜನೆಗೆ ಸಂಬಂಧಪಟ್ಟಂತೆ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಸಾರ್ವಜನಿಕ ವಿಚಾರಣಾ ಪ್ರಕ್ರಿಯೆ ನಡೆಯುವ ಮೊದಲೇ ಮಾಲಿನ್ಯ ನಿಯಂತ್ರಣ ಮಂಡಳಿಗೆ ಇನ್ನೊಂದು ವರದಿಯನ್ನು ಗುಟ್ಟಾಗಿ ಸಲ್ಲಿಸಿದ್ದರ ಬಗ್ಗೆ ಸಿಪಿಐ ವಿಚಾರಣೆ ನಡೆಸಲು ಜಿಲ್ಲಾಡಳಿತ ಶಿಫಾರಸು ಮಾಡಬೇಕು' ಎಂದು ಕಾರವಾರದ ಹಿರಿಯ ವಕೀಲ ಕೆ.ಆರ್.ದೇಸಾಯಿ ಆಗ್ರಹಿಸಿದರು.
ಸಭೆಯಲ್ಲಿ ಮಾಲಿನ್ಯ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಗಣೇಶನ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದಂತೆಯೇ, ಆಶ್ರಯ ಫೌಂಡೇಶನ್ನ ಅಧ್ಯಕ್ಷ ರಾಜೀವ ಗಾಂವ್ಕರ್, `ಸಾರ್ವಜನಿಕ ವಿಚಾರಣಾ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಾತ್ರ ಇರಬೇಕು ಎಂದು ಸರಕಾರದ ಸುತ್ತೋಲೆಯಲ್ಲಿ ಸ್ಪಷ್ಟವಾಗಿದೆ. ಉಳಿದ ಅಧಿಕಾರಿಗಳು ದಯವಿಟ್ಟು ವೇದಿಕೆಯಿಂದ ಕೆಳಗಿಳಿಯಿರಿ.
ಹೆಚ್ಚುವರಿ ಜಿಲ್ಲಾಧಿಕಾರಿಯವರೇ ನಿಗಿದು ಗೊತ್ತಿಲ್ಲವೇ' ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರನ್ನು ಪ್ರಶ್ನಿಸಿದರು.
ವಿಚಾರಣೆ ಆರಂಭಕ್ಕೆ ಮುನ್ನ ತೀವ್ರ ಆಕ್ಷೇಪ ವ್ಯಕ್ತಡಿಸಿದ ವಕೀಲ ಕೆ.ಆರ್.ದೇಸಾಯಿ ಅವರು, `ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಕುರಿತ ಮೊದಲನೇ ವರದಿಯ ಬಗ್ಗೆ ನಾವೆಲ್ಲ ಸಲ್ಲಿಸಿದ ಆಕ್ಷೇಪಗಳಿಂದ ತಪ್ಪಿಸಕೊಳ್ಳಲು ಗುಟ್ಟಾಗಿ ಇನ್ನೊಂದು ವರದಿಯನ್ನು ನಿರ್ಮಾಣ ಕಂಪನಿಯು ಗುಟ್ಟಾಗಿ ತಯಾರಿಸಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಿದೆ. ಸಿಬಿಐ ವಿಚಾರಣೆಯಿಂದ ಈ ವ್ಯಸ್ಥಿತ ಜಾಲದ ಹಿಂದಿರುವ ಅಧಿಕಾರಿಗಳ ಗುಟ್ಟು ರಟ್ಟಾಗುತ್ತದೆ.
ವರದಿಯನ್ನು ಇಂಗ್ಲೀಷ್ ಹಾಗೂ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿ, ಅಂದರೆ ಕನ್ನಡದಲ್ಲಿ ಪ್ರಕಟಿಸಬೇಕು ಎನ್ನುವ ಸರಕಾರದ ನಿಯಮವೇ ಇದ್ದರೂ ಇಂಗ್ಲೀಷ್ನಲ್ಲಿ ಮಾತ್ರ ಪ್ರಕಟಿಸುವ ಮೂಲಕ ಜನ ಸಾಮಾನ್ಯರಿಗೆ ಈ ಯೋಜನೆಗಳ ಸಾಧಕ-ಬಾಧಕ ಗೊತ್ತಾಗದಂತೆ ಮಾಡಲಾಗಿದೆ' ಎಂದು ಆರೋಪಿಸಿದರು.
` ಗೋವಾ ಸಮೀಪದ ಗೋಟೆಗಾಂವ್ ವನ್ಯ ಜೀವಿ ಪ್ರದೇಶ ಉದ್ದೇಶಿತ ಚತಷ್ಪಥ ಹೆದ್ದಾರಿ ಹಾದು ಹೋಗುವ ಜಾಗದಿಂದ ಕೇವಲ 5.50 ಕೀ.ಮೀ. ಅಂತರದಲ್ಲಿದ್ದರೂ ವರದಿಯಲ್ಲಿ ಈ ಬಗ್ಗೆ ಯಾವ ಪ್ರಸ್ತಾಪವೂ ಇ್ಲ್ಲಲವಾಗಿದೆ. ಮಾರ್ಚ್ 4ರಂದು ಅಧಿಸೂಚನೆ ಹೊರಡಿಸಿ ಏ.2 ರಂದು ನಡೆಯುವ ವಿಚಾರಣೆಗೆ ಆಕ್ಷೇಪ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿರುವುದೇ ಅವೈಜ್ಞಾನಿಕವಾಗಿದೆ. ಚತುಷ್ಪಥ ಹೆದ್ದಾರಿ ಯೋಜನೆಯ ಹೆಸರಿನ್ಲ್ಲಲಿ ಷತ್ಪಥ ಹೆದ್ದಾರಿಗಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸುವ ಉದ್ದೇಶ ಹೊಂದಲಾಗಿದೆ.
ಹೆದ್ದಾರಿ ಇಲಾಖೆಯ ಜಾಗವನ್ನೇ ಬಳಕೆ ಮಾಡಿಕೊಂಡು ಯೋಜನೆ ಅನುಷ್ಠಾನಕ್ಕೆ ತರುವುದ ಬಿಟ್ಟು ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡಬೇಕು. ಹೆದ್ದಾರಿ ನಿರ್ಮಾಣ ಕಾರ್ಯದಲ್ಲಿ ಸಂಬಂಧಪಟ್ಟವರಿಂದ ಆಗುವ ನಡೆಯುವ ತಪ್ಪುಗಳ ಬಗ್ಗೆ ಸುಪ್ರಿಂಕೋರ್ಟ್ ವರೆಗೂ ಹೋಗಿ ಹೋರಾಟ ನಡೆಸಲಾಗುವುದು' ಎಂದರು.
ಬ್ಯಾರಿಕೇಡ್ ನಿರ್ಮಾಣ : ಕುಮಟಾದ ಅರವಿಂದ ಪೈ ಮಾತನಾಡಿ, ` ವಿಚಾರಣಾ ಸಭೆಗೆ ಅನಗತ್ಯ ಸಂಖ್ಯೆಯಲ್ಲಿ ಪೋಲಿಸ್ ಸಿಬ್ಬಂದಿಯನ್ನು ಕರೆಸಿದ್ದು ಹಾಗೂ ವೇದಿಕೆಯಿಂದ ಜನರನ್ನು ದೂರವಿಡಲು ನಡುವೆ ಬ್ಯಾರಿಕೇಡ್ ಹಾಕಿದ್ದು, ತೀರಾ ಆಕ್ಷೇಪಾರ್ಹ. ಬ್ಯಾರಿಕೆಟ್ ತೆಗೆದು ಜನರು ವೇದಿಕೆಗೆ ಬಂದು ಮಾತನಾಡಲು ಅವಕಾಶ ಕೋಡಿ' ಎಂದರು.
ಜಿಲ್ಲಾಧಿಕಾರಿಗಳ ಗೈರು ಹಾಜರಿಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರು, `ಜನರು ಇರುವಲ್ಲಿಗೇ ಮೈಕ್ ಕೊಟ್ಟು ಮಾತನಾಡಲು ಅವಕಾಶ ನೀಡಲಾಗುವುದು. ಸಭೆ ನಡೆಸುವಲ್ಲಿ ತಪ್ಪುಗಳಿದ್ದರೂ ಹೊಂದಾಣಿಕೆ ಮಾಡಿಕೊಂಡು ನಿಮ್ಮ ಅನಿಸಿಕೆಗಳನ್ನು ದಾಖಲಿಸಿ, ಅದನ್ನು ಉನ್ನತ ಅಧಿಕಾರಿಗಳ ಸಮಿತಿಗೆ ರವಾನಿಸಲಾಗುವುದು' ಎಂದರು. ಅದರಿಂದ ಜನರು ಆಕ್ರೋಶಗೊಂಡು ಸಭೆಗೆ ಧಿಕ್ಕಾರ ಕೂಗಿದರು.
ಮೋಂಟಿ ಫರ್ನಾಂಡಿಸ್, ಉದ್ಯಮಿ ಶಿರೀಸ ನಾಯಕ, ಜೈರಾಂ ಶಾನಭಾಗ, ಪಿ ಎಸ್ ಪೈ, ಅನಿಲ ನಾಯ್ಕ, ಭಟ್ಕಳ ಮಂಡೇ ಸಾಬ್, ಕಾರವಾರದ ಗಣಪತಿ ಮಾಂಗ್ರೆ, ಜನಶಕ್ತಿ ವೇದಿಕೆಯ ಮಾಧವ ನಾಯಕ ಮೊದಲಾದವರು ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.