ಬೆಂಗಳೂರು: ವಾರ್ತಾ ಸಚಿವ ಸಂತೋಷ್ ಲಾಡ್ ಅವರ ಹೆಸರು ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ನೇರವಾಗಿ ಪ್ರಸ್ತಾಪವಾಗಿಲ್ಲ. ಆದರೆ, ಅನಿಲ್ ಲಾಡ್ ಅವರ ಹೆಸರು ಇತ್ತು. ಈ ಕಾರಣಕ್ಕೆ ಅವರನ್ನು ಸಂಪುಟಕ್ಕೆ ತೆಗೆದುಕೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಂಗಳವಾರ ಇಲ್ಲಿ ತಿಳಿಸಿದರು.
ಸಂತೋಷ್ ಲಾಡ್ ಅವರನ್ನು ಸಂಪುಟಕ್ಕೆ ತೆಗೆದುಕೊಂಡಿರುವುದಕ್ಕೆ ಅವರ ಸಹೋದರ ಅನಿಲ್ ಲಾಡ್ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪರಮೇಶ್ವರ್ ಈ ಪ್ರತಿಕಿ್ರಯೆ ನೀಡಿದರು.
ಪಕ್ಷದ ಹೈಕಮಾಂಡ್, ಸಚಿವರನ್ನು ನೇಮಕ ಮಾಡುವುದಕ್ಕೂ ಮುನ್ನ ಎಲ್ಲವನ್ನೂ ಕೂಲಕಂಷವಾಗಿ ಪರಿಶೀಲಿಸಿದೆ. ಲೋಕಾಯುಕ್ತ ವರದಿಯಲ್ಲಿ ಸಂತೋಷ್ ಹೆಸರು ಎಲ್ಲೂ ನೇರವಾಗಿ ಪ್ರಸ್ತಾಪವಾಗಿಲ್ಲ. ಆದರೆ, ಅನಿಲ್ ಲಾಡ್ ಮತ್ತು ಅವರ ಕಂಪೆನಿಯ ಹೆಸರು ವರದಿಯಲ್ಲಿ ಇದೆ. ಈ ಕಾರಣಕ್ಕೆ ಅವರನ್ನು ಸಂಪುಟಕ್ಕೆ ತೆಗೆದುಕೊಂಡಿಲ್ಲ. ಅವರು ಆರೋಪ ಮುಕ್ತರಾದ ನಂತರ ಅವರಿಗೂ ಅವಕಾಶ ಸಿಗಬಹುದು ಎಂದು ಹೇಳಿದರು.