ಬಾಗಲಕೋಟ ಜಿಲ್ಲೆಯಲ್ಲಿ ಇದೇ ತಿಂಗಳು ಎರಡನೇ ವಾರ ಪ್ರಾಥಮಿಕ ಶಾಲಾ ಶಿಕ್ಷಕರ ಆಂತರಿಕ ವರ್ಗಾವಣೆ ಪ್ರಕ್ರಿಯೆ ನಡೆಯಿತು. ಆದರೆ ಶಿಕ್ಷಣ ಇಲಾಖೆ ಸೂಕ್ತ ಕ್ರಮಗಳನ್ನು ಅನುಸರಿಸದೇ ಇದ್ದುದರಿಂದ ನೂರಕ್ಕೂ ಹೆಚ್ಚು ಶಿಕ್ಷಕರು ವರ್ಗಾವಣೆಯಿಂದ ವಂಚಿತರಾದರು.
ಇಲಾಖೆ ಅಂತರ್ಜಾಲದಲ್ಲಿ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಮಾತ್ರ ಪ್ರಕಟಿಸಿ, ಅಂತಿಮ ಪಟ್ಟಿ ಪ್ರಕಟಣೆ ಮಾಡದೆ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಿತು. ತಾಲೂಕು ಶಿಕ್ಷಣಾಧಿಕಾರಿಗಳ ಕಚೇರಿಯಲ್ಲೂ ಅಂತಿಮ ಪಟ್ಟಿಯನ್ನು ಪ್ರಕಟಣೆ ಮಾಡಲಿಲ್ಲ.
ವರ್ಗಾವಣೆ ನಡೆಯುವ ಸ್ಥಳದಲ್ಲಿ ಅಂತಿಮ ಪಟ್ಟಿ ಪ್ರಕಟ ಮಾಡಿದ್ದರಿಂದ ಅದರಲ್ಲಿನ ಜೇಷ್ಠತಾ ಸಂಖ್ಯೆಗಳು ವ್ಯತ್ಯಾಸವಾಗಿ ಬಹಳಷ್ಟು ಶಿಕ್ಷಕರು ವರ್ಗಾವಣೆ ಸೌಲಭ್ಯದಿಂದ ವಂಚಿತರಾದರು. ಈ ಲೋಪವನ್ನು ಸರಿಪಡಿಸಿ ಅವಕಾಶ ವಂಚಿತರಿಗೆ ನ್ಯಾಯ ಒದಗಿಸಬೇಕು.