ಈ ತಿಂಗಳ 8ರ ಪ್ರ.ವಾ.ಯಲ್ಲಿ ಪ್ರಕಟವಾದ ‘ವರ್ಗಾವಣೆ ನಿಂತಿಲ್ಲ’ ಲೇಖನ ನೂರಕ್ಕೆ ನೂರರಷ್ಟು ಸತ್ಯ. 2006, 2007, 2009ರಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಸೇರಿದ ನನ್ನ ಅನೇಕ ಸ್ನೇಹಿತರಿಗೆ ಈ ಸಲದ ವರ್ಗಾವಣೆ ಆಘಾತ ತಂದಿದೆ.
ವರ್ಗಾವಣೆಗೆ ಅರ್ಜಿ ಆಹ್ವಾನಿಸಿದ ಇಲಾಖೆಯು ಒಂದೇ ಒಂದು ವರ್ಗಾವಣೆಯನ್ನೂ ಯಥೋಚಿತ ಮಾಡಿದಂತೆ ಕಂಡುಬರುವುದಿಲ್ಲ. ಅರ್ಜಿ ಹಾಕಿ ವರ್ಗಾವಣೆಗೆ ಕಾಯುತ್ತಿರುವವರಿಗೆ ವರ್ಗಾವಣೆ ಇಲ್ಲ. ಆದರೆ ಈ ನಡುವೆ ಕೆಲವು ಸ್ನೇಹಿತರು ಬೆಂಗಳೂರಿನ ನಿರ್ದೇಶಕರ ಕಚೇರಿ, ಆಯುಕ್ತರ ಕಚೇರಿ, ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕೈ ಬೆಚ್ಚಗೆ ಮಾಡಿ ಬಂದವರು ಮಾತ್ರ ತಮ್ಮ ಇಷ್ಟದ ಸ್ಥಳಗಳಿಗೆ ವರ್ಗಾವಣೆ ಆಗಿರುತ್ತಾರೆ.
ನಮ್ಮನ್ನು ಹಂಗಿಸುವ ಹಾಗೆ ಗತ್ತಿನಿಂದ ವರ್ಗಾವಣೆಗೊಂಡಿದ್ದಾರೆ. ಪ್ರಾಮಾಣಿಕರನ್ನು ಕೇಳುವವರು ಯಾರೂ ಇಲ್ಲ! ಉನ್ನತ ಶಿಕ್ಷಣ ಇಲಾಖೆ ಲಂಚ ಪಟ್ಟಿಯನ್ನೇ ಪ್ರಕಟಿಸಲಿ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರಿಗೆ ಇಷ್ಟು, ಜಿಲ್ಲಾ ಕೇಂದ್ರಗಳಿಗೆ ಇಷ್ಟು. ತಾಲ್ಲೂಕು ಕೇಂದ್ರಗಳಿಗೆ ಇಷ್ಟು ಎಂದು ಲಂಚದ ವಿವರ ಪ್ರಕಟಿಸಿದರೆ ಅನುಕೂಲವಾಗುತ್ತದೆ. ಈ ಅರ್ಜಿ ನಾಟಕ ಏಕೆ?
–ನೊಂದ ಪ್ರಾಧ್ಯಾಪಕ, ಕೆ.ಆರ್.ನಗರ