ಸಂತೇಮರಹಳ್ಳಿ: ಮಾರುಕಟ್ಟೆಗಳಲ್ಲಿ ರೈತರಿಂದ ಪದಾರ್ಥಗಳನ್ನು ಖರೀದಿಸುವವರು ಕಡ್ಡಾಯವಾಗಿ ಲೈಸೆನ್ಸ್ ಹೊಂದಿರಬೇಕು ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಮಾರಾಟ ಮಂಡಳಿಯ ಮೈಸೂರು ಪ್ರಧಾನ ವ್ಯವಸ್ಥಾಪಕ ಎಂ.ಎನ್.ಅಶೋಕ್ಕುಮಾರ್ ಹೇಳಿದರು.
ಇಲ್ಲಿನ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ಈಚೆಗೆ ನಡೆದ ಬಾಳೆ ಬೇಸಾಯ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರೊಂದಿಗೆ ವ್ಯವಹರಿಸುವ ವ್ಯಾಪಾರಸ್ಥರು, ದಲ್ಲಾಳಿ ಹಾಗೂ ಹವಾಲಿಗಳು ಮಾರುಕಟ್ಟೆ ಸಮಿತಿ ವತಿಯಿಂದ ಲೈಸೆನ್ಸ್ ಪಡೆದಿರಬೇಕು. ಇಲ್ಲವಾದರೆ ಮಾರುಕಟ್ಟೆಯಲ್ಲಿ ವ್ಯವಹರಿಸಲು ಅವಕಾಶವಿಲ್ಲ ಎಂದು ತಿಳಿಸಿದರು. ಖರೀದಿ ಪದಾರ್ಥದ ಆದಾರದ ಮೇಲೆ ಶೇ 1.5 ರಷ್ಟು ಮಾರುಕಟ್ಟೆ ಶುಲ್ಕ ಕಟ್ಟಬೇಕು. ರೈತರಿಂದ ಹೆಚ್ಚು ಹಣ ವಸೂಲಿ ಮಾಡಿದರೆ ಲೈಸೆನ್ಸ್ ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಸಿದರು. ರಾಜ್ಯದ ಯಾವ ಮಾರುಕಟ್ಟೆಗಳಲ್ಲೂ ವ್ಯಾಪಾರ ಮಾಡಲು ಅವಕಾಶವಿಲ್ಲ. ಲೈಸೆನ್ಸ್ ಹೊಂದಿರುವವರೇ ತೂಕ ಮಾಡಬೇಕು.
ಜೊತೆಗೆ ಮಾರುಕಟ್ಟೆ ಸಿಬ್ಬಂದಿ ಸಮ್ಮುಖದಲ್ಲಿಯೇ ತೂಕಗಳು ನಡೆಯಬೇಕು. ದಲ್ಲಾಳಿಗಳ ಮೂಲಕ ಮಾರಾಟ ಮಾಡಿದರೆ ಸ್ಥಳದಲ್ಲಿಯೇ ರೈತರಿಗೆ ಹಣ ನೀಡಬೇಕು. ಮಾರುಕಟ್ಟೆಯ ನಿರ್ದೇಶಕ ಸ್ಥಾನಗಳು ರೈತರಿಗೆ ಮೀಸಲಾಗಿರಬೇಕು ಎಂದು ವಿವರ ನೀಡಿದರು.
ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಆನಂದ್ಕುಮಾರ್, ಹಸಿರು ಸೇನೆ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಸಿ. ಮಹೇಶ್ಕುಮಾರ್, ತೊಟಗಾರಿಕೆ ಇಲಾಖೆಯ ಕೆಂಗೇಗೌಡ, ಮಾರುಕಟ್ಟೆ ನಿರ್ದೇಶಕ ನಂಜಶೆಟ್ಟಿ, ಕಾರ್ಯದರ್ಶಿ ಬೋರಣ್ಣ ಇರು.