ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷ ತುಂಬುವ ಮುನ್ನವೇ ಹಾಳಾದ ರಸ್ತೆ

Last Updated 14 ಫೆಬ್ರುವರಿ 2011, 7:15 IST
ಅಕ್ಷರ ಗಾತ್ರ


ಸಕಲೇಶಪುರ: ಪುರಸಭೆ ವತಿಯಿಂದ ಪಟ್ಟಣದಲ್ಲಿ 2008-09 ಹಾಗೂ 2009-10ನೇ ಸಾಲಿನಲ್ಲಿ 3.50 ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಲಾಗಿರುವ ಡಾಂಬರ್ ರಸ್ತೆಗಳು ಇದೀಗ ವಾಹನ ಚಾಲನೆ ಮಾಡಲು ಸಾಧ್ಯವಿಲ್ಲದ ಮಟ್ಟಿಗೆ ಗುಂಡಿ ಬಿದ್ದು ಹಾಳಾಗಿವೆ. ಡಾಂಬರೀಕರಣ ಮಾಡಲಾದಂತಹ ಬಹುತೇಕ ರಸ್ತೆಗಳು ಕಾಮಗಾರಿ ನಡೆದ ಎರಡೇ ತಿಂಗಳಲ್ಲಿ ಗುಂಡಿಬಿದ್ದು ಹಾಳಾಗಿ ಹೋಗಿದ್ದವು. ಈ ಬಗ್ಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಪುರಸಭೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ, ಗುತ್ತಿಗೆದಾರರು ಎರಡು ವರ್ಷ ನಿರ್ವಹಣೆ ಮಾಡ ಬೇಕಾಗಿರುವುದರಿಂದ ಅವರಿಂದ ಪುನಃ ಗುಂಡಿ ಮುಚ್ಚಿಸಿ ದುರಸ್ಥಿ ಮಾಡಿಸಲಾಗುತ್ತದೆ ಎಂದು ಹಾರಿಕೆ ಉತ್ತರ ನೀಡುತ್ತಲೇ ಬಂದಿದ್ದಾರೆ.

ಡಾಂಬರೀಕರಣಗೊಂಡು ಒಂದೂವರೆ ವರ್ಷ ಮುಗಿಯುತ್ತಾ ಬಂದಿದೆ. ಕಾಮಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಂದ ಅಧಿಕಾರಿಗಳು ದುರಸ್ತಿ ಮಾಡಿಸುವುದಿರಲಿ, ಒಂದೇ ಒಂದು ಗುಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಂಡಿಲ್ಲ. ಡಾಂಬರೀಕರಣ ನಡೆಯುವಾಗ ಸ್ಥಳದಲ್ಲಿ ಪುರಸಭಾ ಎಂಜಿನೀಯರ್ ಖುದ್ದು ಹಾಜರಿದ್ದು ಗುಣಮಟ್ಟದ ಕಾಮಗಾರಿ ಮಾಡಿಸಬೇಕಿತ್ತು. ಸಾರ್ವ ಜನಿಕರು, ಸಂಘ ಸಂಸ್ಥೆಗಳ ಸದಸ್ಯರು ಖಾಸಗಿ ಎಂಜಿನಿಯರ್‌ಗಳು ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ದೂರು ನೀಡಿದರೂ ಪ್ರಯೋಜನವಾಗಿಲ್ಲ.

ಅಧಿಕಾರಿಗಳ ಈ ಮಟ್ಟದ ಬೇಜವಾಬ್ದಾರಿ ಹಾಗೂ ಕರ್ತವ್ಯ ಲೋಪದಿಂದಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಡಾಂಬ ರೀಕಣರಗೊಂಡ ರಸ್ತೆಗಳೆಲ್ಲವೂ ಒಂದೇ ವರ್ಷದಲ್ಲಿ ಗುಂಡಿ ಬಿದ್ದು ಹಾಳಾಗಿ ಹೋಗಿವೆ. ಸಾರ್ವಜನಿಕರ ಕೋಟ್ಯಾಂತರ ರೂಪಾಯಿ ಹಣ ಹಗಲು ದರೋಡೆ ಯಾಗುತ್ತಿದೆ ಎಂದು ಪುರಸಭೆಯ ಮಾಜಿ ಸದಸ್ಯ ಟಿ.ಪಿ.ಕೃಷ್ಣಪ್ಪ ಈಗಾಗಲೆ ಲೋಕಾಯುಕ್ತ ನ್ಯಾಯ ಮೂರ್ತಿಗಳಿಗೆ ದೂರು ನೀಡಿದ್ದಾರೆ.

ಪುರಸಭೆ ವಿರುದ್ಧ ದೂರು ದಾಖಲಿಸಿಕೊಂಡಿರುವ ಲೋಕಾ ಯುಕ್ತರು, ದೂರು ನೀಡಿರುವವರ ಆರೋಪಗಳ ಕುರಿತು ವಿವರಣೆ ಕೇಳಿ ಮುಖ್ಯಾಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ನಿತ್ಯ ಸಾವಿ ರಾರು ಜನ ನಡೆದಾಡುವ, ವಾಹನ ಗಳನ್ನು ಓಡಿಸುವ ಈ ರಸ್ತೆಗಳು ಗುಂಡಿ ಬಿದ್ದು ಹಾಳಾಗಿ ಹೋಗಿರುವುದನ್ನು ಸಾರ್ವಜನಿಕರು ಸಾಕ್ಷೀಕರಿಸುತ್ತಾರೆ.

ಆದರೆ, ‘ಗುತ್ತಿಗೆದಾರರು ಗುಣ ಮಟ್ಟದ ಕಾಮಗಾರಿ ಮಾಡಿದ್ದಾರೆ, ಮಳೆಯಿಂದಾಗಿ ಕೆಲವೆಡೆ ಗುಂಡಿಗಳು ಬಿದ್ದಿವೆ. ಅವುಗಳನ್ನು ಮುಚ್ಚುವಂತೆ ಈಗಾಗಲೆ ಗುತ್ತಿಗೆದಾರರಿಗೆ ನೋಟೀಸ್ ನೀಡಿ ಕ್ರಮ ಕೈಗೊಳ್ಳ ಲಾಗಿದೆ’ ಎಂದು ಮುಖ್ಯಾಧಿಕಾರಿಗಳು ಲೋಕಾಯುಕ್ತ ನ್ಯಾಯಮೂರ್ತಿ ಗಳಿಗೇ ಸುಳ್ಳು ಸ್ಪಷ್ಟನೆ ನೀಡಿರುವುದು ಬೆಳಕಿಗೆ ಬಂದಿದೆ.

ಮುಖ್ಯಾಧಿಕಾರಿಗಳು ನೀಡಿರುವ ವರದಿ ಸುಳ್ಳು, ರಸ್ತೆಗಳೆಲ್ಲಾ ತೀರಾ ಕಳಪೆ ಕಾಮಗಾರಿ ಆಗಿವೆ ಎಂಬುದನ್ನು ತಿಳಿಸಲು ನಾಗರಿಕ ಹಿತರಕ್ಷಣಾ ಸಮಿತಿ, ಜಯಕರ್ನಾಟಕ ಸಂಘ ಸೇರಿದಂತೆ ಕೆಲವು ಸಂಘಟನೆಗಳು ಪಟ್ಟಣದ ಎಲ್ಲಾ ರಸ್ತೆಗಳ ವಿಡಿಯೋ ಚಿತ್ರೀಕರಣ ಮಾಡಿ ಸ್ಥಳೀಯರ ಹೇಳಿಕೆ ರೆಕಾರ್ಡ್ ಮಾಡಿದ ದಾಖಲೆಯನ್ನು ಲೋಕಾಯುಕ್ತ ನ್ಯಾಯ ಮೂರ್ತಿ ಗಳು, ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾ ರಿಗಳು ಹಾಗೂ ಪೌರಾಡಳಿತ ನಿರ್ದೇಶನಾಲಯಕ್ಕೆ ಕಳುಹಿಸಿರುವು ದಾಗಿ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT