ಮಂಗಳೂರು: ದೇಸಿ ಕೃಷಿ ವಿಜ್ಞಾನ ಸಂಶೋಧಿಸಿ ದಕ್ಷಿಣ ಭಾರತದ ಆರು ಭಾಷೆಗಳಲ್ಲಿ ವಿಶ್ವಕೋಶ ರಚಿಸುವ ಕಾರ್ಯ ನಡೆಯುತ್ತಿದೆ. ವರ್ಷದೊಳಗೆ 1000 ಪುಟಗಳ ವಿಶ್ವಕೋಶ ಸಿದ್ಧವಾಗಲಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಹೇಳಿದ್ದಾರೆ.
ಮೂಲ್ಕಿ ಸಮೀಪದ ಪಾವಂಜೆಯಲ್ಲಿ ಭಾನುವಾರ ವಿವಿಧ ಸಂಘಟನೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದೇಸಿ ಕೃಷಿ ವಿಜ್ಞಾನ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ 50ಕ್ಕೂ ಅಧಿಕ ಲೇಖನಗಳು ಸಿದ್ಧವಾಗಿದೆ. ಹಲವು ಕಡೆಗಳಿಗೆ ತೆರಳಿ ಕೃಷಿ ವಿಜ್ಞಾನ ಪ್ರಾತ್ಯಕ್ಷಿಕೆಗಳನ್ನು ನಡೆಸಿ ಅನುಭವನಗಳನ್ನು ದಾಖಲಿಸುವ ಕಾರ್ಯ ನಡೆಯುತ್ತಿದೆ ಎಂದರು.
ಕುಲಪತಿ ಅವರ ಮಾತಿಗೆ ಪೂರಕವಾಗಿ ಅವಲೋಕನ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಅಕ್ಕಿ ಮುಡಿ ಕಟ್ಟುವ ಪ್ರಾತ್ಯಕ್ಷಿಕೆಯನ್ನು ಸ್ವತಃ ಜಾನಪದ ವಿದ್ವಾಂಸರಾಗಿರುವ ಪ್ರೊ.ಗಣೇಶ್ ಅಮೀನ್ ಸಂಕಮಾರ್ ಮಾಡಿ ತೋರಿಸಿದರು.
ಬಳಿಕ ಮೂರು ದೋಣಿಗಳಲ್ಲಿ ನಂದಿನಿ ನದಿಯಲ್ಲಿ ಸುಮಾರು 6 ಕಿ.ಮೀ. ಸಾಗಿ ಈ ಭಾಗದ ಕೃಷಿ ಚಟುವಟಿಕೆಯಲ್ಲಿನ ವಿಶೇಷತೆಗಳು, ಪ್ರಾದೇಶಿಕ ವೈವಿಧ್ಯ, ಕೃಷಿ ಬದುಕು ಸಹಿತ ಹಲವು ವಿಚಾರಗಳ ಬಗ್ಗೆ ಸಂವಾದ ನಡೆಸಲಾಯಿತು.
ವಿಶ್ವಕೋಶ ತಯಾರಿಯ ಹೊಣೆ ಹೊತ್ತಿರುವ ಪ್ರೊ.ಆರ್.ವಿ.ಎಸ್.ಸುಂದರಂ, ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಸ.ಚಿ. ರಮೇಶ್, ಜಾನಪದ ವಿದ್ವಾಂಸ ವಾಮನ ನಂದಾವರ ಇತರರು ಇದ್ದರು.