ಕುಸಿದ ತಡೆಗೋಡೆ: ಪರಿಶೀಲನೆ
ಬೆಂಗಳೂರು: ಕಳೆದ ಎರಡು ದಿನಗಳಿಂದ ನಗರದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗಣೇಶಮಂದಿರ ವಾರ್ಡನಲ್ಲಿ ಇರುವ ಬೃಹತ್ ನೀರುಗಾಲುವೆಗೆ ನಿರ್ಮಿಸಲಾದ ತಡೆಗೋಡೆ ಬಿದ್ದಿರುವ ಕಾರಣ ಪಾಲಿಕೆ ಆಯುಕ್ತ ಎಂ.ಲಕ್ಷ್ಮಿನಾರಾಯಣ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆಯಿಂದ ಸುಮಾರು 30 ಮೀಟರ್ ಉದ್ದದಷ್ಟು ತಡೆಗೋಡೆ ಬಿದ್ದಿರುವುದರಿಂದ ಸರ್ವಿಸ್ ರಸ್ತೆಯಲ್ಲಿ ಓಡಾಡುವ ವಾಹನಗಳು ಮತ್ತು ಸುತ್ತಲಿನ ಜನರಿಗೆ ತೊಂದರೆಯಾಗುತ್ತದೆ. ತಡೆಗೋಡೆ ನಿರ್ಮಾಣ ಕಾರ್ಯ ಇನ್ನು ಎರಡು ದಿನಗಳಲ್ಲಿ ಪ್ರಾರಂಭಿಸಬೇಕು ಎಂದು ಮುಖ್ಯ ಎಂಜಿನಿಯರ್ಗೆ ಸೂಚನೆ ನೀಡಿದರು.
ಕಾಲುವೆಯ ಕೆಲವು ಭಾಗಗಳಲ್ಲಿ ತಡೆಗೋಡೆ ಶಿಥಿಲಗೊಂಡಿರುವ ಕಾರಣ ಅದನ್ನು ನಿರ್ಮಿಸಲು ಅಂದಾಜು ಪಟ್ಟಿಯನ್ನು ಸಿದ್ದಪಡಿಸಬೇಕು ಎಂದು ಸೂಚಿಸಿದರು.
ವಾರ್ಡ್ 163ರಲ್ಲಿ ಕೆಲವು ಕಡೆ ಸಂಚರಿಸಿ ಮಳೆಯಿಂದ ತೊಂದರೆಗೊಳಗಾದ ಸ್ಥಳಗಳನ್ನು ವೀಕ್ಷಿಸಿದರು. ಅಧಿಕಾರಿಗಳಿಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮ ವಹಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕ ಆರ್. ಅಶೋಕ್, ಪಾಲಿಕೆ ಸದಸ್ಯ ಗೊವೀಂದರಾಜ ಮತ್ತು ಎಸ್. ವೆಂಕಟೇಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.