ಮಂಡ್ಯ: ಬೆಂಗಳೂರು- ಮಂಡ್ಯ ನಡುವಿನ ಜೋಡಿ ರೈಲು ಮಾರ್ಗದ ಅಭಿವೃದ್ಧಿ ಕಾಮಗಾರಿ ಡಿಸೆಂಬರ್ 2012ಕ್ಕೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಮುನಿಯಪ್ಪ ಮಂಗಳವಾರ ಹೇಳಿದರು.
ಬೆಂಗಳೂರು- ಮೈಸೂರು ನಡುವಿನ ಈ ಯೋಜನೆಗೆ ಉಭಯ ನಗರಗಳ ನಡುವೆ ಒಟ್ಟು 288 ಎಕರೆ ಭೂಮಿ ಅಗತ್ಯವಿದೆ. ಒಟ್ಟು ರೂ. 530 ಕೋಟಿ ಅಂದಾಜು ವೆಚ್ಚದ ಯೋಜನೆ ಇದಾಗಿದೆ. ಕಾಮಗಾರಿ 2013ರ ಅಂತ್ಯಕ್ಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆಂಗಳೂರು- ಮಂಡ್ಯ ನಡುವೆ ಸೇತುವೆಗಳ ನಿರ್ಮಾಣ, ಹಳಿ ಅಭಿವೃದ್ಧಿ, ವಿದ್ಯುದ್ದೀಕರಣ ಸೇರಿದಂತೆ ಮತ್ತಿತರ ಕಾಮಗಾರಿಗಳು ಪ್ರಗತಿ ಯಲ್ಲಿವೆ. ವರ್ಷಾಂತ್ಯದ ವೇಳೆಗೆ ಬಳಕೆಗೆ ಸಿದ್ಧವಾಗಲಿದೆ ಎಂದರು.
ಆದರೆ, ಮಂಡ್ಯ- ಮೈಸೂರು ನಡುವೆ ಇನ್ನೂ 88 ಎಕರೆ ಭೂಮಿಯನ್ನು ಸರ್ಕಾರ ರೈಲ್ವೆ ಇಲಾಖೆ ವಶಕ್ಕೆ ಒಪ್ಪಿಸಬೇಕಿದೆ. ಶ್ರೀರಂಗಪಟ್ಟಣದ ಪಾರಂಪರಿಕ ಸ್ಥಳ ಮದ್ದಿನ ಮನೆ ಸೇರಿದಂತೆ ಮೂರು ಕಡೆ ಭೂಮಿ ಪಡೆಯುವ ಸಮಸ್ಯೆ ಇದೆ. ಅದು ಬಗೆಹರಿದ ಬಳಿಕ ಕಾಮಗಾರಿ ಪೂರ್ಣವಾಗಲಿದೆ ಎಂದರು.
ಈ ವಿಷಯದಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಹೇಳಲಾಗದು. ರೈತರ ವಿರೋಧದ ಹಿನ್ನೆಲೆಯಲ್ಲಿ ಭೂ ಸ್ವಾಧೀನ ವಿಳಂಬ ಆಗಿರಬಹುದು ಎಂದರು.