ಬೆಂಗಳೂರು: `ನಕ್ಸಲ್ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವ ಮೂಲಕ ಈ ವರ್ಷಾಂತ್ಯದೊಳಗೆ ರಾಜ್ಯವನ್ನು ನಕ್ಸಲ್ ಮುಕ್ತವಾಗಿ ಮಾಡುತ್ತೇನೆ~ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಹೇಳಿದರು.
ನಗರದಲ್ಲಿ ಸೋಮವಾರ ಆರಂಭವಾದ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಇಲಾಖೆಯ ವಾರ್ಷಿಕ ಚಟುವಟಿಕೆಗಳ ವರದಿ ಮಂಡಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 30 ಮಂದಿ ನಕ್ಸಲರು ಮೂರು ತಂಡಗಳಲ್ಲಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ. ನಕ್ಸಲರ ಶರಣಾಗತಿಗೆ ವಿಶೇಷ ಪ್ಯಾಕೇಜ್ ಈಗಾಗಲೇ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಶರಣಾಗುವಂತೆ ನಕ್ಸಲರಿಗೆ ಮನವಿ ಮಾಡಲಾಗಿದೆ. ನಕ್ಸಲರು ಶರಣಾಗತಿಗೆ ಒಪ್ಪದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವಾಗಿ ಮಾಡಲಾಗುತ್ತದೆ. ನಕ್ಸಲ್ ಚಟುವಟಿಕೆಗಳನ್ನು ಸಂಪೂರ್ಣ ನಿಯಂತ್ರಿಸುವ ಉದ್ದೇಶಕ್ಕಾಗಿಯೇ ನಕ್ಸಲ್ ನಿಗ್ರಹ ಪಡೆ ಮತ್ತು ಗುಪ್ತಚರ ದಳವನ್ನು ಹೆಚ್ಚು ಸಶಕ್ತಗೊಳಿಸಲಾಗುತ್ತಿದೆ. ಸದ್ಯದಲ್ಲೇ ಈ ಪ್ರಯತ್ನದ ಫಲಿತಾಂಶ ಸಿಗಲಿದೆ ಎಂದು ತಿಳಿಸಿದರು.
ರಾಜ್ಯದ ಎಲ್ಲ ವಲಯಗಳ ಐಜಿಪಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ರಜಾ ದಿನಗಳನ್ನು ಹೊರತುಪಡಿಸಿ ಜ.15ರಿಂದ ಪ್ರತಿನಿತ್ಯ ಕಚೇರಿಯಲ್ಲಿ ಹಾಜರಿದ್ದು ಕಡ್ಡಾಯವಾಗಿ ಜನತಾ ದರ್ಶನ ನಡೆಸಬೇಕು. ಅಧಿಕಾರಿಗಳು ಮಧ್ಯಾಹ್ನ ಮೂರು ಗಂಟೆಯಿಂದ ನಾಲ್ಕು ಗಂಟೆವರೆಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕು. ಈ ಆದೇಶವನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದರು.
2011ರಲ್ಲಿ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಅಂತೆಯೇ ಕೋಮುಗಲಭೆಗಳು ಸಹ ನಡೆದಿಲ್ಲ. ಸಿಬ್ಬಂದಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸಮಾಜದ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವಲ್ಲಿ ಇಲಾಖೆ ಯಶಸ್ವಿಯಾಗಿದೆ ಎಂದು ಬಿದರಿ ಅಭಿಪ್ರಾಯಪಟ್ಟರು.