ಬೆಂಗಳೂರು: `ಹಳ್ಳಿಗರು ನಾನಾ ಉದ್ಯೋಗ ಅರಸಿಕೊಂಡು ನಗರಕ್ಕೆ ವಲಸೆ ಬರುತ್ತಿರುವುದರಿಂದ ಹಳ್ಳಿಗಾಡಿನ ಸೊಗಡು ಪೂರ್ಣವಾಗಿ ಮರೆ ಯಾಗುತ್ತಿದೆ. ಈ ದಿಸೆಯಲ್ಲಿ ವಲಸೆ ಬಂದಿರುವವರು ತಮ್ಮ ಹಳ್ಳಿಗಳಿಗೆ ಕೊಡುಗೆ ನೀಡಬೇಕು~ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಕರೆ ನೀಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರದ ಜಯನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಂಕುತಳಾ ಜಯದೇವ್ ಶರಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. `ಮಾನವ ಸಂಪನ್ಮೂಲದ ಮುಂದೆ ಎಲ್ಲ ಸಂಪನ್ಮೂಲಗಳು ಗೌಣ ವೆನಿಸುತ್ತವೆ. ಹಾಗಾಗಿ ಪ್ರಸ್ತುತ ದೇಶ ಪಡೆದುಕೊಂಡಿರುವ ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸುವ ಅಗತ್ಯವಿದೆ. ವಿದ್ಯಾವಂತ ರೆಲ್ಲರೂ ಕೃಷಿ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ~ ಎಂದರು.
ಸಾಹಿತಿ ಸಾ.ಶಿ.ಮರುಳಯ್ಯ, ` ಸ್ನೇಹ ಮತ್ತು ಪ್ರೀತಿಯಿಂದ ಮಾತ್ರ ಎದುರಿಗಿರುವ ದುಷ್ಟತನವನ್ನು ಗೆಲ್ಲಲು ಸಾಧ್ಯವಿದ್ದು, ಯುವ ಸಮೂಹ ಸ್ನೇಹಪರ ಗುಣವನ್ನು ಬೆಳೆಸಿ ಕೊಳ್ಳಬೇಕು~ ಎಂದು ಕರೆ ನೀಡಿದರು. ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಇತರರು ಉಪಸ್ಥಿತರಿದ್ದರು.