ಚಿಕ್ಕಬಳ್ಳಾಪುರ: ಸೂಕ್ತ ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ನಗರದ ಬಿ.ಬಿ.ರಸ್ತೆಯ ಬಸಪ್ಪ ಛತ್ರದಲ್ಲಿ ವಾಸವಿರುವ ಸುಮಾರು 47 ನಿರಾಶ್ರಿತ ಕುಟುಂಬಗಳ ಸದಸ್ಯರು ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಹಲವು ತಿಂಗಳಿಂದ ಬಸಪ್ಪ ಛತ್ರದಲ್ಲಿ ವಾಸವಿದ್ದೇವೆ. ಆದರೂ ಸೂಕ್ತ ವಸತಿ ಸೌಕರ್ಯ ಕಲ್ಪಿಸಲಾಗಿಲ್ಲ’ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಸಿಪಿಎಂ ಮುಖಂಡ ಲಕ್ಷ್ಮಯ್ಯ ಮಾತನಾಡಿ, ‘ಬಸಪ್ಪ ಛತ್ರದಲ್ಲಿ ವಾಸವಿರುವ ಕುಟುಂಬಗಳಿಗೆ ಕಂದವಾರದ ಬಳಿ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಲಾಗಿದೆ. ಆದರೆ ಅಲ್ಲಿ ವಾಸವಿರಲು ಸಮರ್ಪಕ ವ್ಯವಸ್ಥೆ ಮಾಡಲಾಗಿಲ್ಲ. ಅಗತ್ಯ ಸೌಕರ್ಯ ಕಲ್ಪಿಸಲಾಗಿಲ್ಲ. ಈಗಾಗಲೇ ವಸತಿ ಸೌಕರ್ಯವಿಲ್ಲದೆ ಸಂಕಷ್ಟಪಡುತ್ತಿರುವ ಕುಟುಂಬದ ಸದಸ್ಯರು ತಾತ್ಕಾಲಿಕ ಶೆಡ್ಗಳಿಗೆ ತೆರಳಿ ವಾಸ ಮಾಡುವ ಸ್ಥಿತಿಯಲ್ಲಿ ಇಲ್ಲ’ ಎಂದರು.
ಪ್ರತಿಭಟನಾಕಾರರಿಂದ ಮನವಿಪತ್ರ ಸ್ವೀಕರಿಸಿದ ಉಪವಿಭಾಗಾಧಿಕಾರಿ ಪಿ.ವಸಂತ್ಕುಮಾರ್ ಮಾತನಾಡಿ, ‘ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಿರಾಶ್ರಿತ ಕುಟುಂಬಗಳಿಗೆ ಕೆಲವೇ ದಿನಗಳಲ್ಲಿ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ಮನೆ ಕಟ್ಟುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನಿರಾಶ್ರಿತರು ತಾತ್ಕಾಲಿಕ ಶೆಡ್ಗಳಲ್ಲಿ ವಾಸವಿರಬೇಕು. ಎಲ್ಲರಿಗೂ ಅಗತ್ಯ ಸೌಕರ್ಯ ಮತ್ತು ನೆರವು ನೀಡಲಾಗುವುದು. ಯಾವುದೇ ಕಾರಣಕ್ಕೂ ಆತಂಕಪಡಬೇಕಿಲ್ಲ’ ಎಂದರು.ತಹಶೀಲ್ದಾರ್ ಪೂರ್ಣಿಮಾ, ನಿರ್ಮಿತಿ ಕೇಂದ್ರದ ಅಧಿಕಾರಿ ಲಕ್ಷ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.