ಮುಂಬೈ (ಪಿಟಿಐ): ಬೃಹತ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯಿಂದ ಇನ್ನೂ ಅನುಮತಿ ಸಿಗದ ಕಾರಣ ವಾಂಖೇಡೆ ಕ್ರೀಡಾಂಗಣದಲ್ಲಿ ಅಕ್ಟೋವರ್ 23ರಂದು ಭಾರತ ಹಾಗೂ ಪ್ರವಾಸಿ ಇಂಗ್ಲೆಂಡ್ ತಂಡಗಳ ನಡುವಣ ಏಕದಿನ ಪಂದ್ಯ ನಡೆಯುವುದು ಅನುಮಾನ ಎನ್ನುವ ಮಾಧ್ಯಮಗಳ ವರದಿಯನ್ನು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ತಳ್ಳಿಹಾಕಿದೆ.
`ವಾಖೇಡೆಯಲ್ಲಿ ಪಂದ್ಯ ನಡೆಯುವುದು ಖಚಿತ~ ಎಂದು ಸ್ಪಷ್ಟಪಡಿಸಿರುವ ಎಂಸಿಎ ಜಂಟಿ ಕಾರ್ಯದರ್ಶಿ ನಿತೀನ್ ದಲಾಲ್ ಅವರು `ಪಂದ್ಯ ಆಯೋಜಿಸುವುದಕ್ಕೆ ಯಾವುದೇ ತೊಡಕಿಲ್ಲ. ನಮ್ಮ ಎಂಜಿನಿಯರ್ ಶಶಿ ಪ್ರಭು ಅವರು ಬುಧವಾರ ಬಿಎಂಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಅಗತ್ಯವಾದ ಎಲ್ಲ ಅನುಮತಿ ಪತ್ರಗಳನ್ನು ಪಡೆಯಲಾಗುತ್ತದೆ~ ಎಂದರು.
ಸಂಪೂರ್ಣವಾಗಿ ನವೀಕರಣಗೊಂಡಿರುವ ವಾಂಖೇಡೆ ಕ್ರೀಡಾಂಗಣದಲ್ಲಿ ಮಳೆ ನೀರು ಹರಿಯುವುದಕ್ಕಾಗಿ ಚರಂಡಿ ನಿರ್ಮಾಣ ಮಾಡುವ ಕೆಲಸ ಇನ್ನೂ ಪೂರ್ಣವಾಗಿಲ್ಲ. ಅದೂ ಬೇಗ ಮುಗಿಯುತ್ತದೆ. ಒಮ್ಮೆ ನಿರ್ಮಾಣ ಪೂರ್ಣಗೊಂಡ ನಂತರ ಬಿಎಂಸಿಯಿಂದ ಪ್ರಮಾಣ ಪತ್ರವನ್ನು ಪಡೆಯಲಾಗುವುದು ಎಂದು ಅವರು ಹೇಳಿದರು.