ಚಿಕ್ಕೋಡಿ: ತಾಲ್ಲೂಕಿನ ಸದಲಗಾದಲ್ಲಿ ವಾಂತಿಭೇದಿಯಿಂದ ಮತ್ತೆ 57 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 60 ಜನರ ಪೈಕಿ 18 ಜನ ಚೇತರಿಸಿಕೊಂಡಿದ್ದಾರೆ. ಉಳಿದಂತೆ ಒಟ್ಟು 116 ಜನರು ಚಿಕ್ಕೋಡಿ ಮತ್ತು ಸದಲಗಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದಲಗಾ ಆರೋಗ್ಯ ಕೇಂದ್ರದಲ್ಲಿ 20 ಜನರಿಗೆ ಹೊರರೋಗಿಗಳ ವಿಭಾಘದಲ್ಲಿ ಚಿಕಿತ್ಸೆ ನೀಡಲಾಗಿದೆ. ಆರು ಮಕ್ಕಳು ಮತ್ತು ಇಬ್ಬರು ಗರ್ಭಿಣಿಯರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕೋಡಿಗೆ ದಾಖಲಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಆತಂಕಕ್ಕೆ ಒಳಗಾಗುವ ಪ್ರಶ್ನೆ ಇಲ್ಲ ಎಂದು ಜಿಲ್ಲಾ ಅಪರ ಆರೋಗ್ಯ ಅಧಿಕಾರಿ ಡಾ. ವಿ.ಬಿ. ಕುಲಕರ್ಣಿ ತಿಳಿಸಿದ್ದಾರೆ.
`ಸದಲಗಾ ಪಟ್ಟಣದಲ್ಲಿ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಜರುಗಿಸಲಾಗುತ್ತಿದೆ. ನಿಯಮಿತವಾಗಿ ನೀರಿನ ಮಾದರಿ ಪರೀಕ್ಷೆ ಮಾಡಲಾಗುತ್ತಿದೆ. ಹೋಟೆಲ್ಅಥವಾ ರಸ್ತೆ ಬದಿಯ ಕೈಗಾಡಿಗಳಲ್ಲಿ ತೆರೆದಿಟ್ಟ ಅಥವಾ ಕರಿದ ಪದಾರ್ಥಗಳ ಮಾರಾಟ ನಿಷೇಧಿಸಿದೆ. 8 ಜನ ವೈದ್ಯರ ತಂಡ ಮತ್ತು 9 ಆ್ಯಂಬುಲೆನ್ಸ್ ನಿಯೋಜಿಸಲಾಗಿದೆ. ಬೋರಗಾಂವ ಗ್ರಾಮದಲ್ಲಿಯೂ ರೋಗ ನಿಯಂತ್ರಣದಲ್ಲಿದೆ~ ಎಂದು ಡಾ. ಕುಲಕರ್ಣಿ `ಪ್ರಜಾವಾಣಿ~ಗೆ ತಿಳಿಸಿದರು.
ಸಂಸದ ಕತ್ತಿ ಭೇಟಿ: ಚಿಕ್ಕೋಡಿ ಸಂಸದ ರಮೇಶ ಕತ್ತಿ ಶುಕ್ರವಾರ ಸದಲಗಾ ಮತ್ತು ಚಿಕ್ಕೋಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ವಾಂತಿಭೇದಿಯಿಂದ ಬಳಲುತ್ತಿರುವ ರೋಗಿಗಳ ಯೋಗಕ್ಷೇಮ ವಿಚಾರಣೆ ನಡೆಸಿದರು. ಸದಲಗಾ ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿಯಿಂದ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸದಸ್ಯ ಶ್ಯಾಮ ರೇವಡೆ, ಉಪವಿಭಾಗಾಧಿಕಾರಿ ಡಾ.ರುದ್ರೇಶ್ ಘಾಳಿ, ತಹಶೀಲ್ದಾರ, ರಾಜಶೇಖರ ಡಂಬಳ, ತಾಲ್ಲೂಕು ವೈದ್ಯಾಧಿಕಾರಿ ಐ.ಬಿ.ಹೆಬ್ಬಳ್ಳಿ ಉಪಸ್ಥಿತರಿದ್ದರು.