ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿ ಅವರ ಸಂಬಂಧಿಕರು ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆಸಿರುವ ಬಗ್ಗೆ ಪಕ್ಷದ ಬಳಿ ಸಾಕ್ಷ್ಯಗಳಿವೆ. ಇಬ್ಬರು ನಾಯಕರಿಗೆ ಮುಜುಗರ ತರುವುದಕ್ಕಾಗಿ ಪಕ್ಷವು ಅವುಗಳನ್ನು ಎಂದಿಗೂ ಬಳಸುವುದಿಲ್ಲ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ದಿಗ್ವಿಜಯ್ ಸಿಂಗ್ ಈ ವಿಚಾರ ತಿಳಿಸಿದ್ದಾರೆ.
`ಎನ್ಡಿಎ ಆಡಳಿತಾವಧಿಯಲ್ಲಿ ಹಲವು ಅವ್ಯವಹಾರಗಳು ನಡೆದಿವೆ. ವಾಜಪೇಯಿ ಮತ್ತು ಅಡ್ವಾಣಿ ಅವರ ಸಂಬಂಧಿಕರ ವಿರುದ್ಧ ನನ್ನ ಬಳಿ ಸಾಕ್ಷ್ಯ ಇಲ್ಲ ಎಂದು ಹೇಳಿದರೆ ಅದು ತಪ್ಪಾಗುತ್ತದೆ. ನಮ್ಮ ಪಕ್ಷವು ಎಂದಿಗೂ ಅವುಗಳನ್ನು ಬಳಸುವುದಿಲ್ಲ~ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
`ನಮ್ಮ ಬಳಿ ಇರುವ ಸಾಕ್ಷ್ಯಗಳಿಂದ ಬಿಜೆಪಿಯ ಇಬ್ಬರು ಹಿರಿಯ ನಾಯಕರ ಸಂಬಂಧಿಕರ ವಿರುದ್ಧ ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆಸಿರುವ ಆರೋಪ ಹೊರಿಸಬಹುದು. ಇದರಿಂದ ಅವರಿಬ್ಬರಿಗೆ ಮುಜುಗರವಾಗಬಹುದು ~ ಎಂದು ಅವರು ಹೇಳಿದ್ದಾರೆ.