ಭೋಪಾಲ್ (ಪಿಟಿಐ): ಅನಾರೋಗ್ಯದಿಂದ ಬಳಲುತ್ತಿರುವ ಅಟಲ್ ಬಿಹಾರಿ ವಾಜಪೇಯಿ ಈಗಿನ ತಮ್ಮ ಯಾತ್ರೆಯಲ್ಲಿ ಜತೆಗಿಲ್ಲದಿರುವುದು ತಮ್ಮನ್ನು ತೀವ್ರವಾಗಿ ಕಾಡುತ್ತಿದೆ ಎಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಹೇಳಿದ್ದಾರೆ.
`ಹಿಂದಿನ ನನ್ನ ಐದು ಯಾತ್ರೆಗಳಲ್ಲೂ ನಾನು ವಾಜಪೇಯಿ ಅವರಿಂದ ಬೆಂಬಲ ಮತ್ತು ಮಾರ್ಗದರ್ಶನ ಪಡೆದಿದ್ದೆ. ಈ ಸಲ ಅವರ ಆಶೀರ್ವಾದ ಪಡೆದ ಬಳಿಕವೇ ನಾನು ಈ ಯಾತ್ರೆಯನ್ನು ಆರಂಭಿಸಿದ್ದೇನೆ. ಆದರೂ ಅವರ ಅನುಪಸ್ಥಿತಿ ನನಗೆ ವಿಪರೀತ ಕಾಡುತ್ತಿದೆ~ ಎಂದು ಅವರು ಇಲ್ಲಿ ಸಾರ್ವಜನಿಕ ಸಭೆಯಲ್ಲಿ ತಿಳಿಸಿದ್ದಾರೆ.
ಗಂಟಲು ನೋವು: ಹೋಶಾಂಗಬಾದ್ನ ಎಸ್ಎನ್ಜಿ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ಅಡ್ವಾಣಿ ಗಂಟಲು ನೋವಿನಿಂದಾಗಿ ಕೆಲವೇ ನಿಮಿಷಗಳಲ್ಲಿ ತಮ್ಮ ಭಾಷಣವನ್ನು ಚುಟುಕಾಗಿ ಮುಗಿಸಿದರು.
ಕಪ್ಪುಹಣವನ್ನು ಮರಳಿ ದೇಶಕ್ಕೆ ತರುವುದರ ಅಗತ್ಯದ ಕುರಿತಂತೆ ಭ್ರಷ್ಟಾಚಾರದ ವಿರುದ್ಧ ಜನ ಚೇತನಾ ಯಾತ್ರೆ ಅಂಗವಾಗಿ ನಡೆಯುತ್ತಿರುವ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
ಕಪ್ಪುಹಣದ ಅಪಾಯದ ಬಗ್ಗೆ ಕೇಂದ್ರ ಗಂಭೀರವಾಗಿ ಮಾತನಾಡುವುದು ಕಾಣುತ್ತಿಲ್ಲ. ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸುವಂತೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.ಭಾನುವಾರ ಬೆಳಗ್ಗೆ ಇಲ್ಲಿ ಅಡ್ವಾಣಿ ಅವರ ಸುದ್ದಿಗೋಷ್ಠಿ ಏರ್ಪಾಡು ಮಾಡಲಾಗಿತ್ತು. ಅವರ ಅನಾರೋಗ್ಯದ ಕಾರಣ ಅದು ರದ್ದಾಯಿತು.