ಬೆಂಗಳೂರು: ಕೋಲ್ಕತ್ತದ ಅಶೋಕನಗರ ವಿದ್ಯಾಸಾಗರ ವಾಣಿ ಭವನ್ ಶಾಲಾ ತಂಡ ಮೂರನೇ ಮಹೀಂದ್ರಾ ಯೂತ್ ಫುಟ್ಬಾಲ್ ಚಾಲೆಂಜ್ ಅಂತರ ನಗರ ಟೂರ್ನಿಯನ್ನು ಗೆದ್ದುಕೊಂಡಿತು.
ಅಶೋಕನಗರ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್ನಲ್ಲಿ ವಾಣಿ ಭವನ್ ತಂಡ 4-1 ಗೋಲುಗಳಿಂದ ಗೋವಾದ ಡಾನ್ ಬಾಸ್ಕೊ ಹೈಸ್ಕೂಲ್ ತಂಡವನ್ನು ಮಣಿಸಿತು.
60 ನಿಮಿಷಗಳ ಅವಧಿಯ ಫೈನಲ್ ಪಂದ್ಯ ಏಕಪಕ್ಷೀಯವಾಗಿ ಕೊನೆಗೊಂಡಿತು. ವಿಜಯಿ ತಂಡದ ಹಬೀಬ್ (13 ಮತ್ತು 29ನೇ ನಿಮಿಷ) ಎರಡು ಗೋಲು ತಂದಿತ್ತರು. ಇತರ ಗೋಲುಗಳನ್ನು ಸುಮನ್ ದತ್ತಾ (3) ಹಾಗೂ ಸುಮಿತ್ ದಾಸ್ (25) ಗಳಿಸಿದರು.
ವಾಣಿ ಭವನ್ ತಂಡ ಮೊದಲ 30 ನಿಮಿಷಗಳಲ್ಲೇ ನಾಲ್ಕೂ ಗೋಲುಗಳನ್ನು ಗಳಿಸಿ ಗೆಲುವನ್ನು ಖಚಿತಪಡಿಸಿಕೊಂಡಿತು. ಡಾನ್ ಬಾಸ್ಕೊ ತಂಡದ ಏಕೈಕ ಗೋಲನ್ನು ಗ್ಲೆವಿಟೊ ಮಿರಾಂಡಾ 49ನೇ ನಿಮಿಷದಲ್ಲಿ ಗಳಿಸಿದರು.
ವಿಜೇತ ತಂಡ ರೂ. 50 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ಪಡೆದರೆ, `ರನ್ನರ್ ಅಪ್' ತಂಡ ರೂ. 30 ಸಾವಿರ ತನ್ನದಾಗಿಸಿಕೊಂಡಿತು. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ 22 ಆಟಗಾರರನ್ನು ನಾಲ್ಕು ದಿನಗಳ ಕಾಲ ನಡೆಯುವ ತರಬೇತಿ ಶಿಬಿರಕ್ಕೆ ಆಯ್ಕೆ ಮಾಡಲಾಯಿತು.
ಸ್ಕಾಟ್ಲೆಂಡ್ನ ಸೆಲ್ಟಿಕ್ ಫುಟ್ಬಾಲ್ ಕ್ಲಬ್ನ ಕೋಚ್ಗಳು ಈ ಆಟಗಾರರಿಗೆ ತರಬೇತಿ ನೀಡಲಿದ್ದಾರೆ. ಇದರಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಎರಡು ಅಥವಾ ನಾಲ್ಕು ಮಂದಿಗೆ ಸೆಲ್ಟಿಕ್ ಕ್ಲಬ್ನಲ್ಲಿ ತರಬೇತಿ ಪಡೆಯುವ ಅವಕಾಶ ಲಭಿಸಲಿದೆ.