ನವದೆಹಲಿ (ಪಿಟಿಐ): ವಿವಿಧ ಸಾಮಾಜಿಕ ಅಭಿವೃದ್ಧಿ ಯೋಜನೆಗಳ ಅಡಿ ನೀಡಲಾದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ದೇಶದ 6 ಲಕ್ಷ ಹಳ್ಳಿಗಳಲ್ಲಿ 10 ಲಕ್ಷ ವಾಣಿಜ್ಯ ಪ್ರತಿನಿಧಿಗಳನ್ನು ನೇಮಿಸುವಂತೆ `ಯುಐಡಿಎಐ~ ಅಧ್ಯಕ್ಷ ನಂದನ್ ನಿಲೇಕಣಿ ನೇತೃತ್ವದ ಕಾರ್ಯಪಡೆ ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿದೆ.
ಹತ್ತು ಲಕ್ಷ ಪ್ರತಿನಿಧಿಗಳನ್ನು ಚಿಕ್ಕ ಎಟಿಎಂನಂತೆ ಬಳಸಿಕೊಂಡು ದೇಶದ 2.25 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿನ ಫಲಾನುಭವಿಗಳಿಗೆ ಹಣ ಪಾವತಿಸಲು ಬಳಸಬಹುದು ಎಂದು ನಂದನ್ ನಿಲೇಕಣಿ, ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರಿಗೆ ಗುರುವಾರ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದ್ದಾರೆ.
ಪೂರ್ಣ ಪ್ರಮಾಣದ ಬ್ಯಾಂಕಿಂಗ್ ಸೌಲಭ್ಯ ಇಲ್ಲದ ಸ್ಥಳಗಳಲ್ಲಿ ಈ ವಾಣಿಜ್ಯ ಪ್ರತಿನಿಧಿಗಳು ಜನರಿಗೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಕಲ್ಪಿಸುವಂತಾಗಬೇಕು.
ಅಲ್ಲದೇ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಯಲ್ಲಿ ಹಣ ಜಮಾ ಮಾಡಲು `ಆಧಾರ್ ಕಾರ್ಡ್~ ಅನ್ನು ಬಳಸಿಕೊಳ್ಳಬೇಕು ಎಂದೂ ನಿಲೇಕಣಿ ನೇತೃತ್ವದ ಈ ಕಾರ್ಯಪಡೆ ಸಲಹೆ ನೀಡಿದೆ.