ಸೌರ ವಿದ್ಯುತ್ ದೀಪ: ತೆರಿಗೆ ವಿನಾಯ್ತಿಗೆ ಆಗ್ರಹ
ಗದಗ: ಸೌರ ವಿದ್ಯುತ್ ದೀಪಗಳಿಗೆ ಸರ್ಕಾರ ಮಾರಾಟ ತೆರಿಗೆ ವಿನಾಯ್ತಿ ನೀಡಬೇಕು ಎಂದು ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ್ ಹಂದೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಸೆಲ್ಕೊ ಸೋಲಾರ್ ಲೈಟ್ನ 30ನೇ ಶಾಖೆ ಉದ್ಘಾಟಿಸಿದ ಅವರು, ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ರಾಜ್ಯದಲ್ಲಿ ಶೇ 44 ರಷ್ಟು ಮನೆಗಳಿಗೆ ವಿದ್ಯುತ್ ಇಲ್ಲ. ಸರ್ಕಾರ ಸೀಮೆಎಣ್ಣೆ ಆಮದು ಮಾಡಿಕೊಂಡು ಸಬ್ಸಿಡಿ ನೀಡುತ್ತಿದೆ.
ಆದರೆ ಅದು ಪ್ರಯೋಜನ ಆಗುತ್ತಿಲ್ಲ. ಮಳೆ ಇಲ್ಲದೆ ವಿದ್ಯುತ್ತಿಲ್ಲ, ಕಲ್ಲಿದ್ದಲನ್ನೇ ಅವಲಂಬಿಸಬೇಕು. 16 ರಾಜ್ಯಗಳಲ್ಲಿಯಂತೆ ರಾಜ್ಯದಲ್ಲೂ ತೆರಿಗೆ ವಿನಾಯಿತಿ ನೀಡುವಂತೆ ಸಚಿವೆ ಶೋಭಾ ಕರಂದ್ಲಾಜೆ ಅವರೊಂದಿಗೆ ಚರ್ಚಿಸಿದ್ದು ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.ಸಂಸತ್ನಲ್ಲಿ ಎಫ್ಡಿಐ, ವಾಲ್ಮಾರ್ಟ್ ಚರ್ಚೆಯಾಗುತ್ತದೆ. ವಿದ್ಯುತ್ ಚರ್ಚೆ ಆಗುವುದೇ ಇಲ್ಲ ಎಂದರು.
ಕೊಡಗು ವಾಣಿಜ್ಯ ಶೃಂಗಸಭೆ 18ರಂದು ಸಿಎಂ ಉದ್ಘಾಟನೆ
ಬೆಂಗಳೂರು: ಉದ್ಯಮ ಸ್ಥಾಪನೆಗೆ ಕೊಡಗು ಜಿಲ್ಲೆಯಲ್ಲಿರುವ ಅವಕಾಶಗಳತ್ತ ಹೂಡಿಕೆದಾರರ ಗಮನ ಸೆಳೆಯಲು ಇದೇ 18ರಂದು `ಕೊಡಗು ವಾಣಿಜ್ಯ ಶೃಂಗಸಭೆ' ಆಯೋಜಿಸಲಾಗಿದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಡಿಕೇರಿಯ ರೇಸ್ ಕೋರ್ಸ್ ರಸ್ತೆ ಕಾವೇರಿ ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ಸಭೆ ಉದ್ಘಾಟಿಸುವರು.
ವಿಧಾನಸಭೆ ಅಧ್ಯಕ್ಷ ಕೆ.ಜಿ.ಬೋಪಯ್ಯ ಅಧ್ಯಕ್ಷತೆ ವಹಿಸುವರು ಎಂದು `ಎಫ್ಕೆಸಿಸಿಐ' ಅಧ್ಯಕ್ಷ ಶಿವಷಣ್ಮುಗಂ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೋಮವಾರಪೇಟೆಯಲ್ಲಿ ಚಿಕ್ಕ ವಿಮಾನ ನಿಲ್ದಾಣಕ್ಕೆ ಸ್ಥಳ ಗುರುತಿಸಲಾಗಿದೆ. ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ಜೈವಿಕ ವಿಜ್ಞಾನ, ಕಾಫಿ ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆಗೆ ಇಲ್ಲಿ ಅವಕಾಶಗಳಿವೆ ಎಂದು ವಿವರಿಸಿದರು.
ಟಾಟಾ ಎಸ್ವಿಎಚ್ನಿಂದ `ನ್ಯೂಹೆವೆನ್' ಟೌನ್ಷಿಪ್
ಬೆಂಗಳೂರು: `ಟಾಟಾ ಹೌಸಿಂಗ್'ನ ಅಂಗಸಂಸ್ಥೆ `ಸ್ಮಾರ್ಟ್ ವ್ಯಾಲ್ಯು ಹೋಮ್ಸ' (ಎಸ್ವಿಎಚ್) ತುಮಕೂರು ರಸ್ತೆ ಪಕ್ಕ `ನ್ಯೂ ಹೆವೆನ್' ಹೆಸರಿನಡಿ 1800 ಮನೆಗಳ ಟೌನ್ಷಿಪ್ ನಿರ್ಮಾಣ ಆರಂಭಿಸಿದೆ.
ಈಜುಕೊಳ, ಸುಸಜ್ಜಿತ ವ್ಯಾಯಾಮ ಶಾಲೆ, ಒಳಾಂಗಣ ಕ್ರೀಡಾಂಗಣ, ರಿಟೇಲ್ ಮಳಿಗೆ ಸೇರಿದಂತೆ ಆಧುನಿಕ ಸೌಕರ್ಯಗಳು 25 ಎಕರೆ ವಿಸ್ತಾರದಲ್ಲಿ ಇರಲಿವೆ. ಅಮೆರಿಕದ `ಕೆಲ್ಲಿಸನ್' ಸಂಸ್ಥೆ ವಾಸ್ತುಶಿಲ್ಪಿಗಳ ವಿನ್ಯಾಸವಿದೆ. 15 ಅಂತಸ್ತಿನ ಕಟ್ಟಡಗಳ ಈ ವಸತಿ ಸಂಕೀರ್ಣದಲ್ಲಿ 2 ಮತ್ತು 3 ಕೊಠಡಿ ಮನೆಗಳಿದ್ದು, ಬೆಲೆ ಕನಿಷ್ಠ ರೂ. 20 ಲಕ್ಷ ಎಂದು `ಟಾಟಾ ಹೌಸಿಂಗ್' ವ್ಯವಸ್ಥಾಪಕ ನಿರ್ದೇಶಕ ಬ್ರೋತಿನ್ ಬ್ಯಾನರ್ಜಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.