ಶಿವಮೊಗ್ಗ: ವಾತ್ಸಲ್ಯ ಆಸ್ಪತ್ರೆ, ಬಿಪಿಎಲ್ ಕಾರ್ಡುದಾರರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಶೇ. 20ರಷ್ಟು ರಿಯಾಯಿತಿ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡಲು ನಿರ್ಧರಿಸಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಧನಂಜಯ ಸರ್ಜಿ ತಿಳಿಸಿದರು.ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಯಾವುದೇ ಸಂಘ-ಸಂಸ್ಥೆಗಳ ನೆರವು ಇಲ್ಲದೆ, ರೋಗಿಗಳಿಂದ ಯಾವುದೇ ಹೆಚ್ಚಿನ ಲಾಭಾಂಶ ನಿರೀಕ್ಷಿಸದೇ ಈ ಸೇವೆ ನೀಡಲು ನಿರ್ಧರಿಸಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಇದಕ್ಕಾಗಿ ಆಸ್ಪತ್ರೆಯಲ್ಲಿ ಸುಸಜ್ಜಿತ, ಹೊಸ ತಂತ್ರಜ್ಞಾನದಿಂದ ಕೂಡಿದ ಡಯಾಲಿಸಿಸ್ ಯಂತ್ರಗಳನ್ನು ಸ್ಥಾಪಿಸಲಾಗಿದೆ ಎಂದರು.
ವಾತ್ಸಲ್ಯ ಸಮೂಹ ಆಸ್ಪತ್ರೆ ಬಳಗ, ರಾಜ್ಯ ಹಾಗೂ ಆಂಧ್ರಪ್ರದೇಶ ಸೇರಿದಂತೆ ಈಗಾಗಲೇ 11 ಆಸ್ಪತ್ರೆಗಳನ್ನು ಸ್ಥಾಪಿಸಿದೆ. ಮುಂಬರುವ ದಿನಗಳಲ್ಲಿ 50ಕ್ಕೂ ಹೆಚ್ಚಿನ ಆಸ್ಪತ್ರೆ ಆರಂಭಿಸುವ ಗುರಿ ಹೊಂದಿದೆ. ನಗರ ಹಾಗೂ ಪಟ್ಟಣ ಪ್ರದೇಶದ ನಿವಾಸಿಗಳಿಗೆ ಗುಣಮಟ್ಟ ಹಾಗೂ ಕೈಗೆಟಕುವ ದರದಲ್ಲಿ ಸೇವೆ ನೀಡುವುದು ಸಂಸ್ಥೆಯ ಮುಖ್ಯ ಧ್ಯೇಯ. ಈ ನಿಟ್ಟಿನಲ್ಲಿ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲೂ ಆಸ್ಪತ್ರೆಯ ಶಾಖೆ ತೆರೆಯುವ ಉದ್ದೇಶವಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ವೈದ್ಯರಾದ ಡಾ.ಎ.ಎಸ್.ದಯಾನಂದ್, ಡಾ.ಅಮಿತಾ ಹೆಗ್ಡೆ, ಡಾ.ಗೋಪಿನಾಥ್, ಸಾರ್ವಜನಿಕ ಸಂಪರ್ಕಾಧಿಕಾರಿ ಧೀರೇಂದ್ರ ಪಂಡರಿ ಉಪಸ್ಥಿತರಿದ್ದರು.
ಕೆರೆಹಳ್ಳಿ: ಜಾತ್ರಾ ಮಹೋತ್ಸವ
ಸೊರಬ: ತಾಲ್ಲೂಕಿನ ಕೆರೆಹಳ್ಳಿ ಗ್ರಾಮದ ಘಾಳೆಮ್ಮದೇವಿ ಜಾತ್ರಾ ಮಹೋತ್ಸವ ಫೆ. 18ರಿಂದ ಮಾರ್ಚ್ 3ರ ವರೆಗೆ ನಡೆಯಲಿದೆ. ಉತ್ಸವದ ಅಂಗವಾಗಿ 18ರಂದು ಲಲಿತಾ ಸಹಸ್ರನಾಮ ಮಂತ್ರಪಠಣ, ಪ್ರತಿಮಾ ಜಾಗಟೇಕರ್ ಅವರಿಂದ ಕೀರ್ತನೆ, 22ರಂದು ಉಡಿ ತುಂಬುವ ಕಾರ್ಯಕ್ರಮ, 23ರಂದು ರಥೋತ್ಸವ, 28ರಂದು ಮೈಸೂರು ಆನಂದ ಅವರಿಂದ ಹಾಸ್ಯಸಂಜೆ, ಮಾರ್ಚ್ 1ರಂದು ಭದ್ರಾವತಿ ಕಲಾವಿದರಿಂದ ರಸಮಂಜರಿ ಅಲ್ಲದೇ, ನಾಟಕಗಳ ಪ್ರದರ್ಶನ, ಜಂಗೀ ಕುಸ್ತಿ, ವಾಲಿಬಾಲ್ ಪಂದ್ಯಾವಳಿ ನಡೆಯಲಿವೆ ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.