ಚಿಂತಾಮಣಿ: ನಿಧಿ ಆಸೆಗಾಗಿ ವಾಮಾಚಾರ ನಡೆಸಿ, ಬಾಲಕಿಯೊಬ್ಬಳನ್ನು ಬಲಿಕೊಡುವ ವಿಫಲ ಯತ್ನವೊಂದು ತಾಲ್ಲೂಕಿನ ಯರ್ರೈಗಾರಹಳ್ಳಿಯ ಸಮೀಪ ಬುಧವಾರ ನಡೆದಿದೆ.
ಮಹಮದ್ ಬಾಷಾ ಎಂಬ ಮಾಂತ್ರಿಕ ನಗರದ ತಪತೇಶ್ವರ ಕಾಲೊನಿಯ ಸುಮಾರು 7 ವರ್ಷದ ಬಾಲಕಿಯನ್ನು ಪೂಜೆ ಮಾಡಿಸುವ ನೆಪದಲ್ಲಿ ಆಕೆಯ ತಾತನ ಸಹಾಯದಿಂದ ಕರೆದುಕೊಂಡು ಹೋಗಿದ್ದ.
ಮಾಂತ್ರಿಕ ಬಾಷಾನ ಕ್ಷುದ್ರಪೂಜೆ ಹಾಗೂ ನಡವಳಿಕೆಯಿಂದ ಅನುಮಾನಗೊಂಡ ಬಾಲಕಿ ಆತನಿಂದ ತಪ್ಪಿಸಿಕೊಂಡು ಬಂದು ಪೋಷಕರಿಗೆ ತಿಳಿಸಿದ್ದಾಳೆ.
ಪೋಷಕರು ಮಾಂತ್ರಿಕ ಬಾಷಾನನ್ನು ಹಿಡಿದು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಿನ್ನೆಲೆ: ಯರ್ರೈಗಾರಹಳ್ಳಿಯ ಬಳಿ ನಿಧಿ ಇದೆ. ಹೊರತೆಗೆಯಬೇಕಾದರೆ ನರಬಲಿ ಕೊಡಬೇಕು ಎಂದು ಬಾಷಾ ಗ್ರಾಮದ ವೆಂಕಟರವಣಪ್ಪ ಎಂಬುವರಿಗೆ ತಿಳಿಸಿದ್ದಾನೆ.
ನಿಧಿ ಆಸೆಯಿಂದ ವೆಂಕಟರವಣಪ್ಪ ಸ್ವಂತ ಮೊಮ್ಮಗಳನ್ನೇ ಬಲಿ ಕೊಡಲು ಯೋಜನೆ ರೂಪಿಸಿದ್ದಾರೆ. ಸೋಮವಾರ ನಗರಕ್ಕೆ ಬಂದು ಮೊಮ್ಮಗಳು ಅನಿಕೇತನಳನ್ನು(7) ಕರೆದುಕೊಂಡು ಹೋಗಿದ್ದಾರೆ.
ಮಂಗಳವಾರ ಕ್ಷುದ್ರಪೂಜೆ ಮತ್ತಿತರ ವಾಮಾಚಾರಗಳನ್ನು ಮಾಡುತ್ತಿದ್ದದ್ದನ್ನು ಕಂಡು ಹಾಗೂ ಅವರ ಮಾತುಗಳಿಂದ ಬಾಲಕಿಗೆ ಅನುಮಾನ ಬಂದು, ತಪ್ಪಿಸಿಕೊಂಡಿದ್ದಾಳೆ.
ನಂತರ ದಾರಿಹೋಕರ ಸಹಾಯದಿಂದ ಮನೆಗೆ ಬಂದು ಪೋಷಕರಿಗೆ ತಿಳಿಸಿದ್ದಾಳೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.