ಬಾಗಲಕೋಟೆ: ಕಬ್ಬು ದರ ನಿಗದಿ ಮತ್ತು ಬಾಕಿ ಪಾವತಿಗೆ ಆಗ್ರಹಿಸಿ ಹಾಗೂ ಭೂಸ್ವಾಧೀನ ವಿರೋಧಿಸಿ ಜಿಲ್ಲೆಯ ರೈತರು ಬುಧವಾರ ಬೀಳಗಿನಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ ರೂ. 2 ಸಾವಿರ ನೀಡಬೇಕು ಮತ್ತು ಬಾಕಿ ಹಣ ಪಾವತಿಗೆ ಕ್ರಮಕೈಗೊಳ್ಳಬೇಕು ಎಂದು ವಿನಂತಿ ಮಾಡಿಕೊಂಡರು.
ಕಬ್ಬು ಬೆಳೆಗಾರರ ಮನವಿಗೆ ಸ್ಪಂದಿಸಿದ ಸಿ.ಎಂ. ವಾರದೊಳಗೆ ಕಬ್ಬಿನ ಬಾಕಿ ಪಾವತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪ್ರತಿ ಟನ್ ಕಬ್ಬಿಗೆ ರೂ. 2 ಸಾವಿರ ನೀಡುವಂತೆ ಕಾರ್ಖಾನೆಗಳಿಗೆ ಮತ್ತೊಮ್ಮೆ ಸೂಚನೆ ನೀಡುತ್ತೇನೆ, ಕೊಡಿಸಲು ಪ್ರಯತ್ನಿಸುತ್ತೇನೆ ಎಂದರು.
ಭೂಸ್ವಾಧೀನ: ಬಾದಾಮಿ ತಾಲ್ಲೂಕಿನ ಕೆರೂರ-ನರನೂರ ಭಾಗದ ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಕೈಗಾರಿಕೆ ಸ್ಥಾಪನೆಗಾಗಿ ಸ್ವಾಧೀನ ಪಡಿಸಿಕೊಳ್ಳಬಾರದು ಎಂದು ಆಗ್ರಹಿಸಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡರು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ನಿರಾಣಿ, ಕಾರಜೋಳ, ರೈತ ಮುಖಂಡರಾದ ರಮೇಶ ಗಡದಣ್ಣವರ, ನಾಗೇಶ ಸೋರಗಾವಿ, ಸುಭಾಶ, ಮಲ್ಲಪ್ಪ ನಾಯಕ, ದುಂದಪ್ಪ ಯರಗಟ್ಟಿ, ತಿಮ್ಮಣ್ಣ ಬಟಕುರ್ಕಿ, ಮಹಾಂತೇಶ ಮೆಣಸಗಿ, ವೈ.ಸಿ.ಕಾಂಬಳೆ, ಡಾ. ಎಂ.ಜಿ.ಕಿತ್ತಲಿ, ಯಮನಪ್ಪ ಚಿಕ್ಕೂರ, ಹನಮಂತಗೌಡ ಕಟಗಿ, ಸತ್ಯಪ್ಪ ಚೂರಿ, ಎಂ.ಡಿ. ಕಿರಗಿ ಮತ್ತಿತರರು ಇದ್ದರು.