ಬೆಂಗಳೂರು: ಮೊದಲ ಸೆಟ್ನಲ್ಲಿ ಪ್ರಬಲ ಪ್ರತಿರೋಧ ಎದುರಾದರೂ ದಿಟ್ಟ ಆಟವಾಡಿದ ಕರ್ನಾಟಕದ ವಾರುಣ್ಯ ಚಂದ್ರಶೇಖರ್ ಡಿಎಸ್ ಮ್ಯಾಕ್ಸ್ ಎಐಟಿಎ ಟೆನಿಸ್ ಟೂರ್ನಿಯ ಮಹಿಳಾ ವಿಭಾಗದ ಸಿಂಗಲ್ಸ್ನಲ್ಲಿ ಗೆಲುವಿನ ಆರಂಭ ಪಡೆದಿದ್ದಾರೆ.
ಕರ್ನಾಟಕ ಲಾನ್ ಟೆನಿಸ್ ಸಂಸ್ಥೆಯ ಕೋರ್ಟ್ನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವಾರುಣ್ಯ 7–5, 6–3ರಲ್ಲಿ ನಿಖಿತಾ ಪಿಂಟೊ ಎದುರು ಗೆಲುವಿನ ನಗೆ ಚೆಲ್ಲಿದರು. ರಾಜ್ಯದ ಇನ್ನೊಬ್ಬ ಭರವಸೆಯ ಆಟಗಾರ್ತಿ ಆಶಾ ನಂದಕುಮಾರ್ 4–6, 6–4, 6–4ರಲ್ಲಿ ಬಿ. ಸಯಾಲಿ ಎದುರು ಜಯ ಸಾಧಿಸಿ ಎರಡನೇ ಸುತ್ತಿಗೆ ಮುನ್ನಡೆದರು.
ಆದರೆ, ಪ್ರಧಾನ ಹಂತದ ಪ್ರಥಮ ಪಂದ್ಯದಲ್ಲಿಯೇ ದೆಹಲಿಯ ಮಾನ್ಯಾ ನಾಗಪಾಲ್ ಭಾರಿ ಆಘಾತ ಅನುಭವಿಸಿದರು. ಶ್ರೇಯಾಂಕ ರಹಿತ ಆಟಗಾರ್ತಿ ಮಹಾರಾಷ್ಟ್ರದ ಅದ್ಯ್ನಾ ನಾಯ್ಕ್ 7–5, 6–1ರಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಮಾನ್ಯ ಎದುರು ಗೆಲುವು ಸಾಧಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರಲ್ಲದೇ, ದೆಹಲಿ ಆಟಗಾರ್ತಿಯನ್ನು ಮೊದಲ ಸುತ್ತಿನಲ್ಲಿಯೇ ಟೂರ್ನಿಯಿಂದ ಹೊರಬೀಳುವಂತೆ ಮಾಡಿದರು.
ಮಹಿಳಾ ವಿಭಾಗದ ಸಿಂಗಲ್ಸ್ನ ಇನ್ನಷ್ಟು ಪಂದ್ಯಗಳಲ್ಲಿ ಮೌಲಿಕಾ ರಾಮ್ 6–2, 2–6, 6–3ರಲ್ಲಿ ಅಲಿ ಸಜ್ಜಾದಿ ಮೇಲೂ, ಪ್ರಗತಿ ನಟರಾಜನ್ 6–2, 6–1ರಲ್ಲಿ ಸೈನಾ ಮದನ್ ವಿರುದ್ಧವೂ, ನಿತ್ಯಾರಾಜ್ ಬಾಬುರಾಜ್ 4–6, 6–2, 6–3ರಲ್ಲಿ ಬಿ. ನಿಖಿತಾ ಮೇಲೂ, ಬಿ. ಅನುಶ್ರೀ 6–2, 6–2ರಲ್ಲಿ ಪ್ರಿಯಾಂಕಾ ರಾವತ್ ವಿರುದ್ಧವೂ, ಲಿಖಿತಾ ಶೆಟ್ಟಿ 6–1, 6–4ರಲ್ಲಿ ಜೆ. ಸಿಂಧು ಮೇಲೂ, ಅಮಲಾ ಅಮೋಲ್ ವಾವ್ರಿಕ್ 7–6, 7–5ರಲ್ಲಿ ಶ್ವೇತಾ ಶ್ರೀಹರಿ ವಿರುದ್ಧವೂ, ದಾಮಿನಿ ಶರ್ಮಾ 7–6, 6–3ರಲ್ಲಿ ನಿಹಾರಿಕಾ ರಾಮ್ ಮೇಲೂ, ಅಮೃತಾ ಮುಖರ್ಜಿ 6–3, 6–0ರಲ್ಲಿ ಸಹನಾ ಪಿ. ಶೆಟ್ಟಿ ವಿರುದ್ಧವೂ, ಪ್ರೀತಿ ಉಜ್ಜಯಿನಿ 7–6, 6–ರಲ್ಲಿ ಸೌಮ್ಯಾ ಮೇಲೂ, ಸುಮತಿ 6–2, 6–0ರಲ್ಲಿ ಪಿ. ಸಾಗರಿಕಾ ವಿರುದ್ದವೂ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟರು.
ರಿಯಾ ಭಾಟಿಯಾ ಮೊದಲ ಸೆಟ್ನಲ್ಲಿ 3–0ರಲ್ಲಿ ಮುನ್ನಡೆ ಹೊಂದಿದ್ದಾಗ ಎದುರಾಳಿ ಆಟಗಾರ್ತಿ ಬಿ. ಕೃಷ್ಣಿಲಾ ನಿವೃತ್ತಿಯಾದರು. ಇದರಿಂದ ರಿಯಾ ಮೊದಲ ಸುತ್ತು ದಾಟುವುದು ಸುಲಭವಾಯಿತು.
ನಿತಿನ್ ಶುಭಾರಂಭ: ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಕೆ. ನಿತಿನ್ ಶುಭಾರಂಭ ಮಾಡಿದರು. ಹೋದ ವರ್ಷದ ರನ್ನರ್ ಅಪ್ ಹಾಗೂ ಅಗ್ರ ಶ್ರೇಯಾಂಕ ಹೊಂದಿರುವ ಈ ಆಟಗಾರ 6–3, 6–2ರಲ್ಲಿ ರಾಮ ರಶೀಬ್ ಎದುರು ಸುಲಭ ಗೆಲುವು ಸಾಧಿಸಿದರು.
ಇದೇ ವಿಭಾಗದ ಇನ್ನಷ್ಟು ಪಂದ್ಯಗಳಲ್ಲಿ ಸೌರಭ್ ಸಿಂಗ್ 7–6, 3–6, 6–3ರಲ್ಲಿ ಕರ್ನಾಟಕದ ಕಿರಣ್ ನಂದಕುಮಾರ್ ಮೇಲೂ, ಫಾರಿಕ್ಸ್ ಮಹಮ್ಮದ್ 7–6, 7–6ರಲ್ಲಿ ಎಲ್ವಿನ್ ಆ್ಯಂಟನಿ ವಿರುದ್ಧವೂ ಗೆಲುವು ಸಾಧಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.