ನವದೆಹಲಿ (ಪಿಟಿಐ): ಸಗಟು ಬೆಲೆ ಸೂಚ್ಯಂಕ ಆಧರಿಸಿದ ವಾರ್ಷಿಕ ಹಣದುಬ್ಬರ ದರವು ಮೇ ತಿಂಗಳಲ್ಲಿ ಮತ್ತೆ ಏರಿಕೆಯಾಗಿದ್ದು, ಬೆಲೆ ಏರಿಕೆಗೆ ಕಡಿವಾಣ ವಿಧಿಸುವ ನಿಟ್ಟಿನಲ್ಲಿ ಆರ್ಥಿಕ ನೀತಿ ನಿರೂಪಕರು ಇನ್ನೂ ಕೆಲ ತಿಂಗಳಗಳ ಕಾಲ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ.
ಹಲವಾರು ಅವಶ್ಯಕ ಸರಕುಗಳಾದ ಅಕ್ಕಿ, ಹಣ್ಣು, ಪೆಟ್ರೋಲ್, ಖಾದ್ಯ ತೈಲ, ಜವಳಿ, ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು, ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಮೇ ತಿಂಗಳಲ್ಲಿ ಹೆಚ್ಚು ದುಬಾರಿಯಾಗಿ ಪರಿಣಮಿಸಿವೆ.
ಏಪ್ರಿಲ್ ತಿಂಗಳಿನಲ್ಲಿ ಶೇ 8.66ರಷ್ಟಿದ್ದ ಹಣದುಬ್ಬರವು, ಮೇ ತಿಂಗಳಿನಲ್ಲಿ ಶೇ 9.06ಕ್ಕೆ ಏರಿಕೆಯಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆ ಅನ್ವಯ, ಮಾರ್ಚ್ ತಿಂಗಳ ಹಣದುಬ್ಬರ ದರವು ಈ ಮೊದಲಿನ ಅಂದಾಜಿಗಿಂತ (ಶೇ 9.04) ಶೇ 9.68ಕ್ಕೆ ಪರಿಷ್ಕರಿಸಲಾಗಿದೆ.
ಸಗಟು ಬೆಲೆ ಸೂಚ್ಯಂಕದಲ್ಲಿ ಗರಿಷ್ಠ ಪಾಲು ಹೊಂದಿರುವ ತಯಾರಿಕಾ ಸರಕುಗಳ ಸೂಚ್ಯಂಕವು ಶೇ 7.27, ಪ್ರಾಥಮಿಕ ಸರಕುಗಳ ಬೆಲೆಗಳು ಶೇ 11.3ರಷ್ಟು ಮತ್ತು ಆಹಾರ ಪದಾರ್ಥಗಳ ಸೂಚ್ಯಂಕವು ಶೇ 8.37ರಷ್ಟು ಏರಿಕೆಯಾಗಿವೆ.
ಹಣದುಬ್ಬರ ಹೆಚ್ಚಳವು ಸರ್ಕಾರದ ನಿರೀಕ್ಷೆಗಳನ್ನು ತಲೆಕೆಳಗು ಮಾಡಿದ್ದು, ಈ ಬೆಳವಣಿಗೆಗೆ ಕಡಿವಾಣ ವಿಧಿಸಲು ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ಸಿ. ರಂಗರಾಜನ್ ಪ್ರತಿಕ್ರಿಯಿಸಿದ್ದಾರೆ.ಹಣದುಬ್ಬರ ಹೆಚ್ಚಳವು ಸಮಸ್ಯೆಯಾಗಿರುವುದು ನಿಜವಾಗಿದ್ದರೂ, ನಾವು ಈಗಲೂ ಆಶಾವಾದಿಯಾಗಿದ್ದೇವೆ. ಬೆಲೆಗಳು ಏರುತ್ತಿರುವುದು ಅನಿರೀಕ್ಷಿತವೇನಲ್ಲ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ.