ಬೆಂಗಳೂರು: ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ‘ವಾಜಪೇಯಿ ಕಪ್’ 17ನೇ ಸೀನಿಯರ್ ದಕ್ಷಿಣ ವಲಯ ವಾಲಿಬಾಲ್ ಚಾಂಪಿಯನ್ಷಿಪ್ನಲ್ಲಿ ಗುರುವಾರ ಮಿಶ್ರಫಲ ಅನುಭವಿಸಿದರು. ಮಹಿಳೆಯರು ತಮಿಳುನಾಡು ತಂಡವನ್ನು ಮಣಿಸಿದರೆ, ಪುರುಷರ ಕೇರಳದ ಎದುರು ಸೋಲು ಅನುಭವಿಸಿದರು.
ಮಹಾಲಕ್ಷ್ಮಿಪುರಂನ ಸ್ವಾಮಿ ವಿವೇಕಾನಂದ ಪಾರ್ಕ್ ಸ್ಪೋರ್ಟ್ಸ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಮಹಿಳೆಯರು 25-16, 25-21, 25-17 ರಲ್ಲಿ ತಮಿಳುನಾಡು ತಂಡವನ್ನು ಸೋಲಿಸಿದರು. ಈ ಪಂದ್ಯ 55 ನಿಮಿಷಗಳ ಕಾಲ ನಡೆಯಿತು.
ಇದೇ ವಿಭಾಗದ ಮತ್ತೊಂದು ಪಂದ್ಯದಲ್ಲಿ ಆಂಧ್ರ ಪ್ರದೇಶ 25-13, 25-13, 25-17 ರಲ್ಲಿ ಪುದುಚೇರಿ ತಂಡದ ವಿರುದ್ಧ ಜಯ ಸಾಧಿಸಿತು.
ಆದರೆ ರಾಜ್ಯದ ಪುರುಷರಿಗೆ ನಿರಾಸೆ ಎದುರಾಯಿತು. ಕೇರಳ ತಂಡ 25-15, 25-23, 25-22 ರಲ್ಲಿ ಕರ್ನಾಟಕದ ವಿರುದ್ಧ ಜಯ ಸಾಧಿಸಿತು. ಒಂದು ಗಂಟೆಯ ಕಾಲ ನಡೆದ ಸೆಣಸಾಟದಲ್ಲಿ ಕರ್ನಾಟಕ ಎರಡು ಮತ್ತು ಮೂರನೇ ಸೆಟ್ನಲ್ಲಿ ಎದುರಾಳಿಗೆ ತಕ್ಕ ಪೈಪೋಟಿ ನೀಡಿತು.
ಮತ್ತೊಂದು ಪಂದ್ಯದಲ್ಲಿ ಪುದುಚೇರಿ 15-25, 25-16, 25-19, 25-14 ರಲ್ಲಿ ಆಂಧ್ರ ಪ್ರದೇಶ ವಿರುದ್ಧ ಗೆಲುವು ಪಡೆಯಿತು.
ಶುಕ್ರವಾರ ನಡೆಯುವ ಪಂದ್ಯಗಳಲ್ಲಿ ಕರ್ನಾಟಕ ಪುರುಷ ಮತ್ತು ಮಹಿಳಾ ತಂಡಗಳು ಕ್ರಮವಾಗಿ ಪುದುಚೇರಿ ಹಾಗೂ ಆಂಧ್ರ ಪ್ರದೇಶ ತಂಡಗಳ ಜೊತೆ ಹೋರಾಟ ನಡೆಸಲಿವೆ.