ಮರಿಯಮ್ಮನಹಳ್ಳಿ (ಬಳ್ಳಾರಿ): ಕರ್ನಾಟಕ ಬಾಲಕಿಯರ ತಂಡ ಶ್ರೀ ವಿನಾಯಕ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 14ವರ್ಷದೊಳಗಿನ ಶಾಲಾಮಕ್ಕಳ 57ನೇ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಶುಕ್ರವಾರ 3-1(25-23, 25-11, 25-13, 25-19)ರಿಂದ ಉತ್ತರ ಪ್ರದೇಶ ತಂಡವನ್ನು ಪರಾಭವಗೊಳಿಸುವ ಮೂಲಕ ಫೈನಲ್ಗೆ ಲಗ್ಗೆ ಇಟ್ಟಿತು.
ಕರ್ನಾಟಕ ತಂಡದ ನಾಯಕಿ ಪವಿತ್ರ, ಪ್ರತಿಭಾ, ನಿರ್ಮಲಾ, ವೀಣಾ, ವಾಣಿ, ಕಾವೇರಿ, ಪೂಜಾ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಶನಿವಾರ ಬೆಳಿಗ್ಗೆ ನಡೆಯುವ ಫೈನಲ್ ಪಂದ್ಯದಲ್ಲಿ ಆತಿಥೇಯ ತಂಡದ ಆಟಗಾರ್ತಿಯರು ಹರಿಯಾಣ ತಂಡವನ್ನು ಎದುರಿಸಲಿದ್ದಾರೆ.
ಮತ್ತೊಂದು ಸೆಮಿಫೈನಲ್ನಲ್ಲಿ ಹರಿಯಾಣ ತಂಡ 3-0(25-12, 25-7, 25-11)ರಿಂದ ಮಹಾರಾಷ್ಟ್ರ ತಂಡವನ್ನು ಸೋಲಿಸಿದರು. ಹರಿಯಾಣದ ಪೂಜಾ, ವಿಜೇತಾ, ಪ್ರೀತಿ, ಪೂನಂ ತಂಡದ ಗೆಲುವಿನಲ್ಲಿ ಮಿಂಚಿದರು.
ಬಾಲಕರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಮಣಿಪುರ ತಂಡ 3-0(25-22, 25-22, 25-18)ರಿಂದ ತಮಿಳುನಾಡು ತಂಡವನ್ನು ಮಣಿಸುವದರ ಮೂಲಕ ಫೈನಲ್ಗೆ ಪದಾರ್ಪಣೆ ಮಾಡಿದರು.
ಮತ್ತೊಂದು ಸೆಮಿಫೈನಲ್ನಲ್ಲಿ ಉತ್ತರ ಪ್ರದೇಶ ತಂಡ 3-0(25-12, 25-20, 25-15)ರಿಂದ ಆಂಧ್ರ ಪ್ರದೇಶ ತಂಡದ ವಿರುದ್ಧ ಜಯ ಸಾಧಿಸಿದರು.
ಬೆಳಿಗ್ಗೆ ನಡೆದ ಬಾಲಕಿಯರ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಕರ್ನಾಟಕ ತಂಡ 3-0 (25-10, 25-20, 25-11)ರಿಂದ ಆಂಧ್ರ ಪ್ರದೇಶ ತಂಡವನ್ನು ಪರಾಭಗೊಳಿಸಿದ್ದರು. ಉತ್ತರ ಪ್ರದೇಶ ತಂಡ 3-0(25-8, 25-18, 25-20)ರಿಂದ ರಾಜಾಸ್ತಾನ ತಂಡವನ್ನು ಮಣಿಸಿದರೆ, ಮಹಾರಾಷ್ಟ್ರ ತಂಡ 3-0 (25-7, 25-15, 25-23)ರಿಂದ ಪಶ್ಚಿಮ ಬಂಗಾಳ ತಂಡವನ್ನು ಸೋಲಿಸಿದ್ದರು. ಹರಿಯಾಣ ತಂಡ 3-0 (25-12, 25-20, 25-11)ರಿಂದ ತಮಿಳುನಾಡು ತಂಡದ ವಿರುದ್ಧ ಗೆಲವು ಸಾಧಿಸಿದ್ದರು.