ತುಮಕೂರು: ಕಿವಿಗಡಚಿಕ್ಕುವ ತಮಟೆ ಸದ್ದು, ಬ್ಯಾಂಡ್ಸೆಟ್ ವಾದ್ಯ, ಕುಣಿದು ಕುಪ್ಪಳಿಸಿದ ಯುವಕರು, ಉಬ್ಬು ಕುಣಿಸಿ, ಕಣ್ಣಗಲಿಸಿ ಭಯ ಹುಟ್ಟಿಸುವ ಪಾಳೇಗಾರರ ಅಬ್ಬರ, ಮಹರ್ಷಿ ವಾಲ್ಮೀಕಿ, ಬೇಡರಕಣ್ಣಪ್ಪ, ಏಕಲವ್ಯ, ಮದಕರಿನಾಯಕ, ಒನಕೆ ಓಬವ್ವನ ಆರ್ಭಟ ನಗರದ ಜನರನ್ನು ಕೆಲ ಹೊತ್ತು ಸ್ಥಂಭೀಭೂತರನ್ನಾಗಿಸಿತು.
-ಇದು ನಗರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಾಯಕ ಮಹಿಳಾ ಸಮಾಜ ಮತ್ತು ನಗರಸಭೆ ವತಿಯಿಂದ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೂ ಮುನ್ನ ಜೂನಿಯರ್ ಕಾಲೇಜಿನಿಂದ ಹೊರಟ ಕಲಾ ತಂಡಗಳ ಅದ್ಧೂರಿ ಮೆರವಣಿಗೆಯಲ್ಲಿ ಕಂಡು ಬಂದ ಸಂಭ್ರಮ.
ತಾಲ್ಲೂಕಿನ ಪತ್ರೆ ಮತ್ತಘಟ್ಟ, ತುರುವೇಕರೆ ತಾಲ್ಲೂಕಿನ ಹೆಗ್ಗೆರೆ ಹಾಗೂ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರ 20ಕ್ಕೂ ಹೆಚ್ಚು ಜನಪದ ಕಲಾ ತಂಡಗಳು ನೀಡಿದ ಕಲಾ ಪ್ರದರ್ಶನ ಜನಾಕರ್ಷಣೆಗೆ ಕಾರಣವಾಯಿತು. ಸೋಮನ ಕುಣಿತ, ಹುಲಿವೇಷ ಮತ್ತು ವೀರಭದ್ರ ಕುಣಿತ ಮೆರವಣಿಗೆಗೆ ಜನಪದ ಮೆರುಗನ್ನು ನೀಡಿತು.
ರಸ್ತೆಯುದ್ದಕ್ಕೂ ಸಾಗಿದ ಮೆರವಣಿಗೆಯು ವಾಲ್ಮೀಕಿ ಜನಾಂಗದ ಇತಿಹಾಸ, ರಾಮಾಯಣ ಬರೆದ ವಾಲ್ಮೀಕಿ ಮಹರ್ಷಿಯ ಪಾಂಡಿತ್ಯ, ಪಾಳೇಗಾರರ ಶೌರ್ಯ, ಆಳ್ವಿಕೆಗಳನ್ನು ಕಣ್ಮುಂದೆ ತರುವಲ್ಲಿ ಸಫಲವಾಯಿತು. ನಗರದ ಶುಶ್ರೂಷಕಿಯರ ಸರ್ಕಾರಿ ಕಾಲೇಜು ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಹಾಗೂ ಇತರ ಸಂಘ ಸಂಸ್ಥೆಗಳ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಶಾಸಕ ಎಸ್.ಶಿವಣ್ಣ ಮೆರವಣಿಗೆಗೆ ಚಾಲನೆ ನೀಡಿ, ಜೊತೆಯಲ್ಲಿ ಸಾಗಿದರು. ನಗರದ ಬಾರ್ ಲೈನ್ ರಸ್ತೆ, ಅಶೋಕ ರಸ್ತೆ ಹಾದು ಟೌನ್ ವೃತ್ತದಲ್ಲಿ ಏರ್ಪಡಿಸಿದ್ದ ಸಮಾರಂಭದ ವೇದಿಕೆ ಬಳಿ ಬಂದು ತಲುಪಿತು.
ವಿವಿಧೆಡೆಯಿಂದ ಬಂದಿದ್ದ ಮುಖಂಡರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.