ಬೇಲೂರು: `ಭಾರತದಲ್ಲಿನ ಕಾವ್ಯ ಪರಂಪರೆ ಮಹರ್ಷಿ ವಾಲ್ಮೀಕಿ ಅವರಿಂದ ಆರಂಭವಾಯಿತು. 21ನೇ ಶತಮಾನದಲ್ಲೂ ವಾಲ್ಮೀಕಿ ರಾಮಾಯಣದ ಮಹತ್ವ ಕಡಿಮೆಯಾಗಿಲ್ಲ~ ಎಂದು ಉಪನ್ಯಾಸಕ ಹಾಗೂ ಸಾಹಿತಿ ರಾಜಶೇಖರ ಮಠಪತಿ ನುಡಿದರು.
ತಾಲ್ಲೂಕು ಆಡಳಿತದ ವತಿಯಿಂದ ಮಂಗಳವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಅರಿಯದೆ ಜಯಂತಿ ಆಚರಿಸಿದರೆ ಅದಕ್ಕೆ ಅರ್ಥ ಬರುವುದಿಲ್ಲ. ಪ್ರತಿಭೆ ಮತ್ತು ಶಕ್ತಿಗೆ ಯಾವುದೇ ಬಂಧನವಿಲ್ಲ, ಅದು ನದಿಯಂತೆ ಹರಿಯುತ್ತದೆ. ವಾಲ್ಮೀಕಿ ರಾಮಾಯಾಣ ಮಹಾ ಕಾವ್ಯದಲ್ಲಿ ಪಾತ್ರಗಳ ಮೂಲಕ ಮನುಷ್ಯನ ಆದರ್ಶದ ಚಿಂತನೆಯನ್ನು ಮಾಡಿದ್ದಾರೆ. ವಾಲ್ಮೀಕಿ ರಾಮಾಯಣ ಭಾರತದ ಎಲ್ಲ ಭಾಷೆಗಳಲ್ಲಿ ಪ್ರಕಟವಾಗಿದೆ. ವಿದೇಶಗಳಲ್ಲೂ ಜನಪ್ರಿಯತೆ ಪಡೆದಿದೆ~ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಚಿತ್ರ ನಟಿ ಹೇಮಾಚೌಧರಿ, `ವಾಲ್ಮೀಕಿ ತಮ್ಮ ರಾಮಾಯಣ ಕಾವ್ಯದಲ್ಲಿ ಶ್ರೀರಾಮಚಂದ್ರನನ್ನು ಆದರ್ಶ ವ್ಯಕ್ತಿಯನ್ನಾಗಿಸಿದ್ದಾರೆ. ಇಂದಿನ ಪುರುಷರೂ ಸಹ ರಾಮಚಂದ್ರನ ತತ್ವಗಳನ್ನು ಪಾಲಿಸುವುದು ಅವಶ್ಯಕವಾಗಿದೆ~ ಎಂದರು.