ಬೆಂಗಳೂರು: `ಕಲ್ಪನೆಗಳ ಆಧಾರದ ಮೇಲೆ ರಚನೆಗೊಂಡ ಯಾವುದೇ ಸಾಹಿತ್ಯ ಕೃತಿಗಳು ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾರವು. ಸಾಹಿತ್ಯವನ್ನು ರಚಿಸುವ ಸಂದರ್ಭದಲ್ಲಿ ಲೇಖಕಿಯರು ವಾಸ್ತವಕ್ಕೆ ಹೆಚ್ಚು ಒತ್ತು ನೀಡಬೇಕು~ ಎಂದು ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸಲಹೆ ನೀಡಿದರು.
ಕರ್ನಾಟಕ ಲೇಖಕಿಯರ ಸಂಘವು ನಗರದಲ್ಲಿ ಭಾನುವಾರ ಆಯೋಜಿಸಿದ್ದ 33ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
`ಮನೆ ನಿರ್ವಹಣೆಯ ಜತೆಯಲ್ಲಿ ಲೇಖಕಿಯರು ಸಾರಸ್ವತ ಲೋಕಕ್ಕೆ ತಮ್ಮನ್ನು ಸಮರ್ಪಕವಾಗಿ ಅರ್ಪಿಸಿಕೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ. ಪ್ರಸ್ತುತ ದಿನಗಳಲ್ಲಿ ಲೇಖಕಿಯರ ಸಂಖ್ಯೆ ದ್ವಿಗುಣಗೊಳ್ಳಬೇಕಿದೆ~ ಎಂದು ಹೇಳಿದರು.
`ಹೆಣ್ಣು ಮಕ್ಕಳು ತುಸು ಹೆಚ್ಚು ಭಾವಜೀವಿಗಳಾಗಿರುತ್ತಾರೆ. ವೃತ್ತಿಯನ್ನು ನಿರ್ವಹಿಸುವಾಗಲೂ ಭಾವನೆಗಳ ತಾಕಲಾಟವನ್ನು ಅನುಭವಿಸುತ್ತಾರೆ. ಹಾಗಾಗಿ ಗಂಡಿನಂತೆ ಹೆಣ್ಣು ಕೂಡ ಹೆಚ್ಚಿನ ಪ್ರಮಾಣದಲ್ಲಿ ವೃತ್ತಿಪರತೆಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ~ ಎಂದರು.
ಹಿರಿಯ ವಕೀಲೆ ಹೇಮಲತಾ ಮಹಿಷಿ, `ಲೇಖಕಿಯರ ಸಂಘದ ಮೂಲಕ ಅನೇಕ ಲೇಖಕಿಯರು ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಮಹಿಳೆಯರ ಲೇಖನಕ್ಕೆ ಪ್ರಾಶಸ್ತ್ಯ ದೊರಕುತ್ತಿದ್ದ ಸಂದರ್ಭದಲ್ಲಿ ಹುಟ್ಟಿಕೊಂಡ ಸಂಘವು, ಲೇಖಕಿಯರ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ~ ಎಂದು ಹೇಳಿದರು.
ಲೇಖಕಿ ಬಿ.ಕೆ.ಸರೋಜಾ ಅವರ `ಅಪೂರ್ವ ಮಿಲನ~ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಎಚ್.ಎಸ್.ಪಾರ್ವತಿ ದತ್ತಿನಿಧಿ ಪ್ರಶಸ್ತಿಯನ್ನು ಹೇಮಲತಾ ಮಹಿಷಿ ಅವರಿಗೆ ಪ್ರದಾನ ಮಾಡಲಾಯಿತು.
ಲೇಖಕಿಯರಾದ ಎಲ್.ವಿ.ಶಾಂತಕುಮಾರಿ, ಡಾ.ಎನ್.ಎಸ್.ಲೀಲಾ, ಪ್ರೊ.ಬಿ.ವೈ.ಲಲಿತಾಂಬ, ಟಿ.ಗಿರಿಜಾ ಮತ್ತು ರಜಿಯಾ ಬಳಬಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಲೇಖಕಿ ಡಾ.ಎನ್.ಗಾಯಿತ್ರಿ ಇತರರು ಉಪಸ್ಥಿತರಿದ್ದರು.