ಬೆಂಗಳೂರು: ನಗರದ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ವಾಸ್ತಶಿಲ್ಪ ವಿಭಾಗ ಮತ್ತು `ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಇನ್ ಆರ್ಕಿಟೆಕ್ಚರ್~ ಸಂಸ್ಥೆಯ ಸಹಭಾಗಿತ್ವದಲ್ಲಿ 6ನೇ ರಾಷ್ಟ್ರೀಯ ವಾಸ್ತುಶಿಲ್ಪ ಸಮಾವೇಶವನ್ನು ಶನಿವಾರ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರೀಯ ವಾಸ್ತುಶಿಲ್ಪ ಮಂಡಳಿ (ಎನ್ಐಎಎಸ್ಎ) ಅಧ್ಯಕ್ಷ ವಿಜಯ್ ಸೊಹೊನಿ, `ಭಾರತದ ವಾಸ್ತುಶಿಲ್ಪ ರಾಜಧಾನಿ ಅಹಮದಾಬಾದ್, ದೆಹಲಿ, ಮುಂಬೈಗಳಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದೆ. ಸಾಕಷ್ಟು ಕಟ್ಟಡ ಕಾಮಗಾರಿಗಳು ನಡೆಯುತ್ತಿರುವುದು ಇದಕ್ಕೆ ಕಾರಣ. ಈಗಾಗಲೇ ಮಂಡಳಿಯಡಿ 256 ವಾಸ್ತುಶಿಲ್ಪ ಶಿಕ್ಷಣ ಸಂಸ್ಥೆಗಳಿದ್ದು, 54 ಸಾವಿರ ವಿದ್ಯಾರ್ಥಿಗಳಿದ್ದು ಅಧ್ಯಯನ ಮಾಡುತ್ತಿದ್ದಾರೆ~ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬಿಎಂಎಸ್ ಶಿಕ್ಷಣ ಟ್ರಸ್ಟ್ನ ಟ್ರಸ್ಟಿ ಡಾ.ಪಿ.ದಯಾನಂದ ಪೈ, `ವಿದ್ಯಾರ್ಥಿಗಳು ಕೇವಲ ಐಟಿ, ಬಿಟಿ ಕಟ್ಟಡಗಳನ್ನು ಮಾತ್ರ ಯೋಜನಾಬದ್ಧವಾಗಿ ಕಟ್ಟುತ್ತಾರೆ. ಆದರೆ ಬಡವರಿಗೂ ಅನುಕೂಲವಾಗುವ ಮನೆಗಳ ನಿರ್ಮಾಣದತ್ತ ಗಮನ ಹರಿಸಬೇಕು. ವಾಸ್ತುಶಿಲ್ಪ ಓದುತ್ತಿರುವ ವಿದ್ಯಾರ್ಥಿಗಳ ಹಣಕಾಸು ನೆರವಿಗಾಗಿ ಬಿಎಂಎಸ್ ಸಂಸ್ಥೆ 10 ಲಕ್ಷ ರೂಪಾಯಿಗಳ ದತ್ತಿ ನಿಧಿ ಸ್ಥಾಪಿಸಲಿದೆ~ ಎಂದು ಹೇಳಿದರು.
ಎನ್ಐಎಎಸ್ಎ ನಿರ್ದೇಶಕಿ ಜಯಶ್ರೀ ದೇಶಪಾಂಡೆ, ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಶೇಖರ್, ವಾಸ್ತುಶಿಲ್ಪ ವಿಭಾಗದ ಮುಖ್ಯಸ್ಥೆ ಡಾ.ಮಮತಾ ಪಿ.ರಾಜ್ ಭಾಗವಹಿಸಿದ್ದರು.
ಪ್ರಬಂಧಗಳಿಗೆ ಬಹುಮಾನ: ಸಮ್ಮೆಳನದ ಪ್ರಯುಕ್ತ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪಂಜಾಬ್ನ ಪಗ್ವಾರ ಕಾಲೇಜಿನ ನಿತೀಶ್ ಗೋಸ್ವಾಮಿ ಅವರ `ಕಮ್ಯೂನ್ ಫಾರ್ ವಿಡಿಯೊ ಗೇಮರ್ಸ್~ ಎಂಬ ಪ್ರಬಂಧಕ್ಕೆ ಪ್ರಥಮ ಬಹುಮಾನ (ರೂ 75,000 ನಗದು), ಮುಂಬೈನ ಕಮಲಾ ರಹೇಜಾ ವಿದ್ಯಾನಿಧಿ ಕಾಲೇಜಿನ ಜೀನಲ್ ಸಾವ್ಲಾ ಅವರ `ಮಂಡಪೇಶ್ವರ್ ಥ್ರೂ ಪಾಲಿಂಪ್ಸೆಸ್ಟ್ಸ್ ಆಫ್ ಟೈಂ~ ಎಂಬ ಪ್ರಬಂಧಕ್ಕೆ ದ್ವಿತೀಯ (ರೂ 40,000), ನಗರದ ಆರ್.ವಿ. ಕಾಲೇಜಿನ ಹರ್ಷಿತಾ ಶೆಟ್ಟಿ ಅವರ `ವಾರ್ ಮ್ಯೂಸಿಯಂ ಅಂಡ್ ಮೆಮೊರಿಯಲ್ ಪಾರ್ಕ್~ ಎಂಬ ಪ್ರಬಂಧಕ್ಕೆ ತೃತೀತ ಬಹುಮಾನ (ರೂ 20,000) ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.