ನಗರದಲ್ಲಿ ಅಧೋಗತಿಗೆ ಇಳಿದಿರುವ ರಸ್ತೆಗಳ ದುಸ್ಥಿತಿಯನ್ನು ದಿನಪತ್ರಿಕೆಗಳು ಪ್ರತಿದಿನ ಪ್ರಧಾನವಾಗಿ ಬಿಂಬಿಸುತ್ತಿವೆ. ಇದಕ್ಕೆ ಎಳ್ಳಷ್ಟೂ ಸೊಪ್ಪುಹಾಕದ ಇಲಾಖೆ ಅಥವಾ ಜನಪ್ರತಿನಿಧಿಗಳಿಗೆ ನಾಚಿಕೆಯಾಗದಿದ್ದರೂ ಕರೆಂಟು ಮತ್ತು ನೀರಿನ ಸಂಪರ್ಕವನ್ನು ಕಡಿತಗೊಳಿಸುತ್ತಾರೆಂದು ಹೆದರಿ ತೆರಿಗೆಯನ್ನು ಸಕಾಲಕ್ಕೆ ಪಾವತಿಸುತ್ತಿರುವ ಶ್ರೀಸಾಮಾನ್ಯನಿಗೆ ನಾಚಿಕೆಯಾಗಬೇಕು.
ಪ್ರಪಂಚದ ಯಾವ ದೇಶದಲ್ಲೂ ಈ ರೀತಿಯ ರಸ್ತೆಗಳನ್ನು ಕಾಣಲು ಸಾಧ್ಯವಿಲ್ಲವೇನೊ? ನಾಗರಿಕ ಭರಿಸುವ ತೆರಿಗೆ ಹಣ ಅವ್ಯವಹಾರ ಕಳಪೆ ಕಾಮಗಾರಿಗಳಲ್ಲಿ ಸೋರಿಹೋಗಿ ನಮಗೆ ಈ ದುಃಸ್ಥಿತಿ ಒದಗಿದೆಯೆಂದರೆ ತಪ್ಪಾಗಲಾರದು. ಮೃತ್ಯುವನ್ನು ಆಹ್ವಾನಿಸಿ ಬಾಯಿತೆರೆದು ಕುಳಿತಿರುವ ಕುಳಿಗಳನ್ನು ಇಲಾಖೆ ಪ್ರತಿದಿನ ಲೆಕ್ಕಹಾಕುವುದು ವಾರಕ್ಕೊಮ್ಮೆ ಅವುಗಳನ್ನು ಮುಚ್ಚುವುದು ಪರಿಹಾರವಲ್ಲ.
ಹಳೇ ಮದ್ರಾಸು ರಸ್ತೆಯಿಂದ ಬಿ.ಇ.ಎಂ.ಎಲ್. ಮಾರ್ಗ ವಿಮಾನಪುರದ ಸಂಪರ್ಕ ರಸ್ತೆ 1950ರಲ್ಲಿ ಕಾಂಕ್ರೀಟ್ನಿಂದ ನಿರ್ಮಿಸಲಾಗಿದೆ. ಅರುವತ್ತು ವರ್ಷಗಳೇ ಕಳೆದರೂ ಇಂದಿಗೂ ಅದರ ಗುಣಮಟ್ಟವನ್ನು ನೋಡುವುದೇ ಚಂದ. ಸಚಿವರು, ಜನಪ್ರತಿನಿಧಿಗಳು ಎಂಜಿನಿಯರುಗಳು ಗುತ್ತಿಗೆದಾರರು ಒಮ್ಮೆ ಈ ರಸ್ತೆಯನ್ನು ನೋಡಲಿಕ್ಕಾದರೂ ಸಂಚರಿಸಲೇಬೇಕು. ಕುಲಗೆಟ್ಟ ರಸ್ತೆಗಳಿಂದ ಸಂಚಾರದ ಒತ್ತಡ, ಅಪಘಾತಗಳು, ಚಾಲಕರಿಗೆ ಸೊಂಟನೋವು,
ಬೆನ್ನುಮೂಳೆ ನೋವು, ವಾಹನ ಬಿಡಿಭಾಗಗಳ ಅಕಾಲಿಕ ಸವೆತದಂತಹ ತೊಂದರೆಗಳಿಗೆ ಮತ್ತು ಅದರಿಂದಾಗುವ ನಷ್ಟಕ್ಕೆ ಹೊಣೆ ಯಾರು? ಸಾಲದ್ದಕ್ಕೆ ಪ್ರಮುಖ ರಸ್ತೆಗಳಲ್ಲೇ ಬೀಡುಬಿಟ್ಟಿರುವ ಜಾನುವಾರುಗಳು ವಾಹನ ಸವಾರರಿಗೆ ಮತ್ತೊಂದು ಸವಾಲು. ಇದು ದಿನನಿತ್ಯ ಬಿಮಾನಗರ ಮತ್ತು ಎಚ್.ಎ.ಎಲ್. ಠಾಣಾ ವ್ಯಾಪ್ತಿಯಲ್ಲಿನ ಸಾಮಾನ್ಯ ದೃಶ್ಯ. ಪರಿಹಾರ ಕಾಣದ ಜನ ಪರಿತಪಿಸುತ್ತಿದ್ದಾರೆ. ಇದಕ್ಕೆ ಕೊನೆಯೇ ಇಲ್ಲವೇ?
– -ಎಂ. ವೆಂಕಟಪ್ಪ