ನವದೆಹಲಿ (ಪಿಟಿಐ): ಮೂರನೇ ವ್ಯಕ್ತಿಯ(ಥರ್ಡ್ ಪಾರ್ಟಿ) ವಾಹನ ವಿಮೆ ನಿರಾಕರಿಸುವ ವಿಮಾ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು `ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ~ (ಐಆರ್ಡಿಎ) ಎಚ್ಚರಿಸಿದೆ.
ಕೆಲವು ವಿಮಾ ಕಂಪೆನಿಗಳು `ಥರ್ಡ್ ಪಾರ್ಟಿ~ ವಾಹನ ವಿಮೆ ಪರಿಹಾರ ಇತ್ಯರ್ಥಪಡಿಸಲು ನಿರಾಕರಿಸುತ್ತಿರುವ ಪ್ರಕರಣಗಳು ವರದಿಯಾಗಿವೆ. ಈ ಕುರಿತು ಪ್ರಾಧಿಕಾರ ತನಿಖೆ ನಡೆಸುತ್ತಿದ್ದು, ಶಿಸ್ತಿನ ಕ್ರಮವನ್ನೂ ಕೈಗೊಳ್ಳಲಿದೆ ಎಂದು `ಐಆರ್ಡಿಎ~ ಅಧ್ಯಕ್ಷ ಜೆ. ಹರಿನಾರಾಯಣ್ ಇಲ್ಲಿ `ಭಾರತೀಯ ಕೈಗಾರಿಕಾ ಒಕ್ಕೂಟ~(ಸಿಐಐ) ಆಯೋಜಿಸಿದ್ದ ಸಭೆಯಲ್ಲಿ ಹೇಳಿದರು.
`ಥರ್ಡ್ ಪಾರ್ಟಿ~ ವಾಹನ ವಿಮೆಯ ವ್ಯಾಪ್ತಿಗೆ ಪಾದಚಾರಿಗಳು, ವಾಹನದಲ್ಲಿ ಹಣ ಪಾವತಿಸಿ ಮತ್ತು ಹಣ ಪಾವತಿಸದೆ ಪ್ರಯಾಣಿಸುವ ಪ್ರಯಾಣಿಕರೂ ಬರುತ್ತಾರೆ. ವಾಣಿಜ್ಯ ವಾಹನಗಳಿಗೆ ಇಂತಹ ವಿಮೆ ಮರು ಪಾವತಿ ಮೊತ್ತ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಹಲವು ಖಾಸಗಿ ವಿಮೆ ಕಂಪೆನಿಗಳು ವಿಮೆ ನೀಡಲು ನಿರಾಕರಿಸುತ್ತಿವೆ. ಆದ್ದರಿಂದ ಸರ್ಕಾರಿ ಸ್ವಾಮ್ಯದ ವಿಮಾ ಕಂಪೆನಿಗಳೇ ಈ ವಿಭಾಗದಲ್ಲಿ ಮುಂಚೂಣಿಯಲ್ಲಿವೆ ಎಂದು ಹರಿನಾರಾಯಣ್ ಹೇಳಿದ್ದಾರೆ.