ನವದೆಹಲಿ (ಐಎಎನ್ಎಸ್): ಭ್ರಷ್ಟಾಚಾರ ಹಗರಣದಲ್ಲಿ ಜೈಲು ಸೇರಿರುವ ಕಳಂಕಿತ ರಾಜಕಾರಣಿಗಳಾದ ಎ.ರಾಜಾ ಮತ್ತು ಸುರೇಶ್ ಕಲ್ಮಾಡಿ ತಿಹಾರ್ ಜೈಲಿನಲ್ಲಿ ವಿಶೇಷ ತಿನಿಸುಗಳ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರು.
ಹೊಸ ವರ್ಷದ ಪ್ರಯುಕ್ತ ಅವರಿಗೆ ಪನ್ನೀರ್, ಖೀರು, ಹಲ್ವ, ಪೂರಿ, ಪರಾಟದಂತಹ ವಿಶೇಷ ಖಾದ್ಯಗಳನ್ನು ನೀಡಲಾಗಿತ್ತು. ಅಲ್ಲದೆ ತಮ್ಮ ಕುಟುಂಬದೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಈ ವಿಐಪಿ ಕೈದಿಗಳು, ಸಹ ಕೈದಿಗಳಿಗೆ ಶುಭಾಶಯ ಕೋರಿದರು. ಜೈಲು ಅಧಿಕಾರಿಗಳು ನೀಡಿದ ಸಿಹಿಯನ್ನು ಪಡೆದುಕೊಂಡರು.
ಉತ್ತಮ ನಡತೆ ಇರುವ ಕೈದಿಗಳಿಗೆ ಮಾತ್ರ ದೂರವಾಣಿ ಬಳಸಲು ಜೈಲಿನಲ್ಲಿ ಅನುಮತಿ ನೀಡಲಾಗುತ್ತದೆ.
2ಜಿ ಹಗರಣದಲ್ಲಿ ರಾಜಾ ಕಳೆದ ವರ್ಷದ ಫೆಬ್ರುವರಿಯಿಂದಲೂ ಜೈಲಿನಲ್ಲಿದ್ದಾರೆ. 2010ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕಲ್ಮಾಡಿ ಅವರನ್ನು ಏಪ್ರಿಲ್ ತಿಂಗಳಿನಿಂದ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.