ನವದೆಹಲಿ (ಪಿಟಿಐ): ಯಾತ್ರಾರ್ಥಿಗಳೊಂದಿಗೆ ಸರ್ಕಾರಿ ವೆಚ್ಚದಲ್ಲಿ ಅಧಿಕಾರಿಗಳನ್ನು ಹಜ್ಗೆ ಕಳುಹಿಸುವ ಸರ್ಕಾರದ ಕ್ರಮವನ್ನು `ಧಾರ್ಮಿಕ ದುರಾಚರಣೆ~ ಎಂದು ಸುಪ್ರೀಂಕೋರ್ಟ್ ಚಾಟಿ ಬೀಸಿದೆ.
`ಇದೆಂತಹ ಆಚರಣೆ? ಇದರಿಂದ ರಾಜಕೀಯ ಲಾಭ ಇರಬಹುದು. ಆದರೆ ಧಾರ್ಮಿಕವಾಗಿ ಇದು ದುರಾಚರಣೆ. ಇದು ವಾಸ್ತವವಾಗಿ ಹಜ್ ಯಾತ್ರೆಯೇ ಅಲ್ಲ~ ಎಂದು ಆಫ್ತಾಬ್ ಆಲಂ ಮತ್ತು ರಂಜನಾ ಪ್ರಕಾಶ್ ದೇಸಾಯಿ ಅವರನ್ನೊಳಗೊಂಡ ನ್ಯಾಯಪೀಠ ಕಟುವಾಗಿ ಖಂಡಿಸಿತು.
11,000 ಯಾತ್ರಾರ್ಥಿಗಳ ಪೈಕಿ 800 ಯಾತ್ರಾರ್ಥಿಗಳನ್ನು ಆಯ್ದು `ಅತಿಗಣ್ಯ ವ್ಯಕ್ತಿ~ ಪಟ್ಟಿಯಡಿ ಕೋಟಾ ನಿಗದಿ ಮಾಡಿ ಹಜ್ಗೆ ಕಳುಹಿಸಲು ವಿದೇಶಾಂಗ ಸಚಿವಾಲಯಕ್ಕೆ ನಿರ್ದೇಶನ ನೀಡಿ ಬಾಂಬೆ ಹೈಕೋರ್ಟ್ ಆದೇಶ ಪ್ರಕಟಿಸಿತ್ತು.
ಇದರ ವಿರುದ್ದ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ಪೀಠ ಹೀಗೆ ಹೇಳಿತು. ಈ ಮುನ್ನ ಪೀಠ ಅ.10ರಂದು ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ವಿಧಿಸಿತ್ತು.ಮಂಗಳವಾರ ತಡೆಯಾಜ್ಞೆ ವಿಸ್ತರಿಸಿದ ವೇಳೆ ನ್ಯಾಯಾಲಯ, ಸರ್ಕಾರಿ ವೆಚ್ಚದಲ್ಲಿ ಅತಿಗಣ್ಯರ ಪಟ್ಟಿಯಡಿ ಅಧಿಕಾರಿಗಳು ಯಾತ್ರೆಗೆ ತೆರಳುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿತು.
ಸರ್ಕಾರ ಮುಂದಿನ ವರ್ಷ ಹಜ್ ಯಾತ್ರೆಗೆ ನೂತನ ನೀತಿ ಜಾರಿಗೊಳಸಬೇಕು. ನ್ಯಾಯಾಲಯ ಇದರ ಮೇಲ್ವಿಚಾರಣೆ ನೋಡಿಕೊಳ್ಳಲಿದೆ ಎಂದು ಅಟಾರ್ನಿ ಜನರಲ್ ಜಿ.ಇ.ವಹನ್ವತಿ ಮತ್ತು ವಕೀಲ ಹ್ಯಾರಿಸ್ ಬೀರನ್ ಅವರಿಗೆ ಪೀಠ ತಿಳಿಸಿತು.
ಸರ್ಕಾರ ನೂತನ ನೀತಿ ಸಿದ್ಧಪಡಿಸುವವರೆಗೆ ವಿಚಾರಣೆಯನ್ನು ಬಾಕಿ ಉಳಿಸಲು ಕೂಡ ನ್ಯಾಯಮೂರ್ತಿಗಳು ನಿರ್ಧರಿಸಿದರು.`ಹಿಂದೆ ತಮ್ಮ ಜವಾಬ್ದಾರಿಗಳೆಲ್ಲ ಮುಗಿದ ಮೇಲೆ ಯಾತ್ರಾರ್ಥಿಗಳು ಸ್ವಂತ ವೆಚ್ಚದಲ್ಲಿ ಹಜ್ ಯಾತ್ರೆಗೆ ತೆರಳುತ್ತಿದ್ದರು. ಆದರೆ ಈಗ ಸರ್ಕಾರ, ಅಧಿಕಾರಿಗಳ ಯಾತ್ರೆಗೂ ನಿಧಿ ನೆರವು ನೀಡುತ್ತಿದೆ. ಇದು ಕೆಟ್ಟ ಧಾರ್ಮಿಕ ಪದ್ಧತಿ~ ಎಂದು ಅಫ್ತಾಬ್ ಅಲಂ ಹೇಳಿದರು.