ಹೊಸಪೇಟೆ: ತಾಲ್ಲೂಕಿನಾದ್ಯಂತ ವಿಕಲಾಂಗರಿಗಾಗಿ ಪ್ರತಿವರ್ಷ ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳುವುದು ಸೇರಿದಂತೆ ಜನಪರ ಕಾರ್ಯಕ್ರಮಗಳಿಗೆ ಜೈನ ಸಮುದಾಯದ ಸಂಪೂರ್ಣ ಸಹಕಾರವಿದೆ ಎಂದು ರಾಷ್ಟ್ರೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಬಾಬುಲಾಲ್ ಜಿ. ಜೈನ್ ತಿಳಿಸಿದರು.
ಭಾರತ ವಿಕಾಸ ಪರಿಷತ್, ಜೈನ್ ಯುಥ್ ಫೆಡರೇಷನ್ ಹಾಗೂ ನವಸ್ಫೂರ್ತಿ ವಿಕಲಚೇತನರ ಸಂಘದ ಆಶ್ರಯದಲ್ಲಿ ಗುರುವಾರ ನಗರದ ಹಳೇ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕೃತಕ ಕೈ-ಕಾಲುಗಳು, ಕ್ಯಾಲಿಪರ್ಸ್ ಹಾಗೂ ಊರುಗೋಲುಗಳ ಉಚಿತ ವಿತರಣಾ ಶಿಬಿರದಲ್ಲಿ ಮಾತನಾಡಿದರು.
ವಿಕಾಸ ಪರಿಷತ್ ಸಹಯೋಗದಲ್ಲಿ ತಾಲ್ಲೂಕಿನಾದ್ಯಂತ ಸಂಚಾರಿ ಆಸ್ಪತ್ರೆಯನ್ನು ಆರಂಭಿಸುವ ಉದ್ದೇಶವಿದೆ. ಜೊತೆಗೆ ಹಲವು ಉಪಯುಕ್ತ ಕಾರ್ಯಕ್ರಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಪರಿಷತ್ ಉತ್ತರ ಪ್ರಾಂತ ಸಹ ಕಾರ್ಯದರ್ಶಿ ಗೋವಿಂದ ಕುಲಕರ್ಣಿ ಹಾಗೂ ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ.ಎಚ್. ಎರಿಯಪ್ಪ ಮಾತನಾಡಿದರು. ಪರಿಷತ್ ಅಧ್ಯಕ್ಷ ಶ್ಯಾಮ್ ಚೌದ್ರಿ,ಜೈನ್ ಸಮಾಜದ ಬಾಬುಲಾಲ್ ಭವರಲಾಲ್ ನಾಹರ್, ಬಿಜೆಪಿ ಮುಖಂಡ ಭರಮಲಿಂಗನಗೌಡ, ಧರ್ಮೇಂದ್ರ ಸಿಂಗ್, ನವಸ್ಫೂರ್ತಿ ವಿಕಲಚೇತನರ ಸಂಘದ ಅಧ್ಯಕ್ಷ ಹೊನ್ನೂರ್ವಲಿ, ಪರಿಷತ್ ಪದಾಧಿಕಾರಿಗಳಾದ ವಿಠ್ಠಲ್ದಾಸ್ ಕೆ. ಪಟೇಲ, ಮೋಹನ್ ಪಟೇಲ್, ಜೈನ್ ಯುಥ್ ಫೆಡರೇಷನ್ ಅಧ್ಯಕ್ಷ ಕಾಂತಿಲಾಲ್ ಜೈನ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಜಂಬಯ್ಯ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಮಹಮ್ಮದ್ ಸರ್ವರ್ ಸೇರಿದಂತೆ ಇತರರು ಹಾಜರಿದ್ದರು.150ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಪ್ರಯೋಜನ ಪಡೆದುಕೊಂಡರು.