ನವದೆಹಲಿ (ಪಿಟಿಐ): ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ವಿಚಾರಣಾಧೀನ ಆರೋಪಿಗಳು ಮತ್ತು ಕೈದಿಗಳಿಗೆ ಜಾಮೀನು ನೀಡುವಂತೆ ಕೇಂದ್ರ ಸರ್ಕಾರ ಎಲ್ಲ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದೆ.
ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಾತ್ರ ಈ ಶಿಫಾರಸು ಮಾಡಲಾಗಿದ್ದು, ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಇಲ್ಲ ಎಂದು ಸರ್ಕಾರ ತನ್ನ ಮನವಿಗೆ ಸಮಜಾಯಿಷಿ ನೀಡಿದೆ.
ಮಾಹಿತಿ ಹಕ್ಕು ಕಾಯ್ದೆ ಅಡಿ ಕಾರ್ಯಕರ್ತ ಸುಭಾಷ್ ಅಗರವಾಲ್ ಕೇಳಿದ ಮಾಹಿತಿಗೆ ಕೇಂದ್ರ ಕಾನೂನು ಸಚಿವಾಲಯ ಈ ವಿವರ ನೀಡಿದೆ. ಜಾಮೀನು ನೀಡುವುದು ಅಥವಾ ತಿರಸ್ಕರಿಸುವುದು ಅಂತಿಮವಾಗಿ ನ್ಯಾಯಾಲಯಗಳ ವಿವೇಚನೆಗೆ ಬಿಟ್ಟ ವಿಚಾರ ಎಂದೂ ಸಚಿವಾಲಯ ಸ್ಪಷ್ಟಪಡಿಸಿದೆ.