ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ತಮ್ಮ ವಿರುದ್ಧದ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಕೋರ್ಟ್್ ತಿರಸ್ಕರಿಸಿದೆ.
ಹೀಗಾಗಿ ರಾಷ್ಟ್ರದ್ರೋಹದ ಆರೋಪದ ವಿಚಾರಣೆಯಿಂದ ಹೊರಬರಲು ಮುಷರಫ್ ನಡೆಸುತ್ತಿರುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ತಮ್ಮ ಮೇಲಿನ ಆರೋಪಗಳಿಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಿರುವುದು, ನ್ಯಾಯಮೂರ್ತಿಗಳ ನೇಮಕಾತಿ ಹಾಗೂ ಸರ್ಕಾರಿ ವಕೀಲರ ನೇಮಕಾತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮುಷರಫ್ ಮೂರು ಅರ್ಜಿಗಳನ್ನು ಸಲ್ಲಿಸಿದ್ದರು. ಇಸ್ಲಾಮಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ರಿಯಾಜ್ ಅಹಮ್ಮದ್ ಖಾನ್ ಈ ಅರ್ಜಿಗಳನ್ನು ವಜಾಗೊಳಿಸಿದರು.
ಇದೇ ಮೊದಲು: ಇದೇ ವೇಳೆ ನ್ಯಾಯಾಲಯವು ಮುಷರಫ್ ಅವರಿಗೆ, ೨೦೦೭ರಲ್ಲಿ ತುರ್ತು ಪರಿಸ್ಥಿತಿ ಹೇರಿ ರಾಷ್ಟ್ರದ್ರೋಹ ಎಸಗಿದ ಆರೋಪಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಮಂಗಳವಾರ ಕೋರ್ಟ್ಗೆ ಖುದ್ದು ಹಾಜರಾಗಲು ಸಮನ್್ಸ ನೀಡಿದೆ. ರಾಷ್ಟ್ರದಲ್ಲಿ ಮಾಜಿ ಸೇನಾ ಸರ್ವಾಧಿಕಾರಿಯೊಬ್ಬರು ರಾಷ್ಟ್ರದ್ರೋಹದ ಆರೋಪಕ್ಕಾಗಿ ವಿಚಾರಣೆಗೆ ಗುರಿಯಾಗಿರುವುದು ಇದೇ ಮೊದಲಾಗಿದೆ. ಒಂದೊಮ್ಮೆ ಮುಷರಫ್ ಅಪರಾಧಿ ಎಂಬ ತೀರ್ಪು ಹೊರಬಿದ್ದಲ್ಲಿ ಅವರು ಜೀವಾವಧಿ ಶಿಕ್ಷೆ ಅಥವ ಮರಣ ದಂಡನೆ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ಮುಷರಫ್ ಅವರು ತುರ್ತು ಪರಿಸ್ಥಿತಿ ವಿಧಿಸಿದ್ದು ಸೇನಾ ಮುಖ್ಯಸ್ಥರಾಗಿ ಅಧಿಕಾರದಲ್ಲಿದ್ದಾಗ, ಹೀಗಾಗಿ ಸೇನಾ ನ್ಯಾಯಾಲಯ ಮಾತ್ರ ಈ ಕುರಿತು ವಿಚಾರಣೆ ನಡೆಸಬಹುದು ಎಂದು ಮುಷರಫ್ ಪರ ವಕೀಲರು ವಾದ ಮಂಡಿಸಿದರು. ಈ ವಿಚಾರಣೆಗೆ ಸಂಬಂಧಿಸಿದಂತೆ ಸರ್ಕಾರಿ ವಕೀಲರಾಗಿ ನೇಮಕಗೊಂಡಿರುವ ಅಕ್ರಮ ಶೇಖ್ ಅವರು ಬಲಪಂಥೀಯ ಪಕ್ಷಗಳೊಡನೆ ಸಂಪರ್ಕ ಹೊಂದಿದವರಾಗಿದ್ದಾರೆ; ಅಲ್ಲದೇ, ಅವರು ಮುಷರಫ್ ಅವರ ಕಟುಟೀಕಾಕಾರರು ಆಗಿದ್ದಾರೆ. ಇಂಥವರನ್ನು ಪ್ರಾಸಿಕ್ಯೂಟರ್ ಆಗಿ ನೇಮಿಸಿರುವುದು ಸರಿಯಲ್ಲ ಎಂದರು. ಆದರೆ ನ್ಯಾಯಮೂರ್ತಿಯವರು ಈ ವಾದವನ್ನು ಪುರಸ್ಕರಿಸಲಿಲ್ಲ.