ನವದೆಹಲಿ (ಐಎಎನ್ಎಸ್): ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ವಿವಾದಕ್ಕೆ ಒಳಗಾದ ದಂಪತಿಯ ಮಕ್ಕಳು ನೀಡುವ ಸಾಕ್ಷಿಯನ್ನು ಕಡೆಗಣಿಸಲಾಗದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಪತ್ನಿಯ ವರ್ತನೆಯಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದ ಕಾರಣಕ್ಕೆ ವಿಶ್ವನಾಥ್ ಎಂಬುವವರಿಗೆ ವಿಚ್ಛೇದನಕ್ಕೆ ಅನುಮತಿ ನೀಡಿರುವ ಸುಪ್ರೀಂಕೊರ್ಟ್, ಒಂದು ಬಾರಿಯ ಜೀವನಾಂಶ ಪರಿಹಾರವಾಗಿ 50 ಲಕ್ಷ ರೂಪಾಯಿಗಳನ್ನು ನೀಡುವಂತೆ ಆದೇಶಿಸಿದೆ.
ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಹೊರಗಿನವರು ಬಂದು ಸಾಕ್ಷಿ ನೀಡಬೇಕು ಎಂದು ನಿರೀಕ್ಷಿಸುವುದು ತಪ್ಪು. ಕುಟುಂಬದ ಸದಸ್ಯರು, ಹತ್ತಿರದ ಸಂಬಂಧಿಕರು, ಸ್ನೇಹಿತರು ಹಾಗೂ ನೆರೆಹೊರೆಯವರು ಸ್ವಾಭಾವಿಕ ಸಾಕ್ಷಿಗಳಾಗುತ್ತಾರೆ ಎಂದು ನ್ಯಾಯಮೂರ್ತಿ ದೀಪಕ್ ವರ್ಮಾ ಮತ್ತು ದೀಪಕ್ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
ಸಾಕ್ಷಿ ಹೇಳಿದವರು ಗಂಡ ಅಥವಾ ಹೆಂಡತಿ ಕಡೆಯವರು ಎಂಬ ಕಾರಣಕ್ಕೆ ಆ ಸಾಕ್ಷಿಯನ್ನು ಕಡೆಗಣಿಸಲಾಗದು ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.