ನವದೆಹಲಿ (ಐಎಎನ್ಎಸ್): ಲೋಕಸಭಾ ಚುನಾವಣೆ ಫಲಿತಾಂಶ ಶುಕ್ರವಾರ ಬಹಿರಂಗವಾಗಲಿದೆ. ಆದರೆ ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ವಿಜಯೋತ್ಸವಕ್ಕೆ ಅಣಿಯಾಗಿದೆ.
ದೆಹಲಿಯಲ್ಲಿನ ಬಿಜೆಪಿ ಕಚೇರಿಯನ್ನು ಗುರುವಾರವೇ ಸುಣ್ಣ ಬಣ್ಣ ಬಳಿದು ಅಲಂಕರಿಸಲಾಗಿದ್ದು, ಕಾರ್ಯಕರ್ತರು ಪಟಾಕಿ ಮತ್ತು ಸಿಹಿತಿಂಡಿಗಳೊಂದಿಗೆ ವಿಜಯೋತ್ಸವ ಆಚರಿಸಲು ಸಜ್ಜಾಗಿದ್ದಾರೆ. ಹಳೆದೆಹಲಿಯ ವಿಶೇಷ ಪರಿಣತ ಬಾಣಸಿಗರ ತಂಡವೊಂದು 2.5 ಟನ್ ಲಾಡು ಮತ್ತು ಇತರ ಭಾರತೀಯ ಸಿಹಿ ತಿಂಡಿಗಳನ್ನು ತಯಾರಿಸುವಲ್ಲಿ ನಿರತವಾಗಿದೆ.
‘ಲಾಡುಗಳನ್ನು ತಯಾರಿಸಲು ವಿಶೇಷವಾಗಿ 35 ಬಾಣಸಿಗರನ್ನು ಕರೆತರಲಾಗಿದೆ. 2 ಕಾರುಗಳ ತುಂಬಾ ಪಟಾಕಿಗಳು ಈಗಾಗಲೇ ಕಚೇರಿಗೆ ತಲುಪಿವೆ. ಸಂಗೀತ ತಂಡಗಳನ್ನೂ ನಿಯೋಜಿಸಲಾಗಿದೆ’ ಎಂದು ಬಿಜೆಪಿ ವ್ಯಾಪಾರ ವಿಭಾಗದ ರಾಷ್ಟ್ರೀಯ ಸಹಸಂಚಾಲಕ ಘನಶ್ಯಾಮ ದಾಸ್ ಅಗರವಾಲ್ ಹೇಳಿದ್ದಾರೆ.