ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಾಪುರ: ಗಣೇಶನಿಗೆ ಸಂಭ್ರಮದ ವಿದಾಯ

Last Updated 8 ಸೆಪ್ಟೆಂಬರ್ 2011, 10:50 IST
ಅಕ್ಷರ ಗಾತ್ರ

ವಿಜಾಪುರ: ನಗರದ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಬಹುತೇಕ ಗಣೇಶ ವಿಗ್ರಹಗಳನ್ನು ಬುಧವಾರ ರಾತ್ರಿ ವಿಸರ್ಜಿಸಲಾಯಿತು.

ವಿಜಾಪುರ ನಗರದಲ್ಲಿ 250ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಏಳನೇ ದಿನವಾದ ಬುಧವಾರ ಅವುಗಳಲ್ಲಿ ಬಹುತೇಕ ಮೂರ್ತಿಗಳ ವಿಸರ್ಜನೆ ನಡೆಯಿತು. ಗಣೇಶೋತ್ಸವ ಮೆರವಣಿಗೆಗೆ ಎರಡೆರಡು ಕಡೆಗಳಲ್ಲಿ ಸ್ವಾಗತ ಮತ್ತು ಸನ್ಮಾನದ ಭಾಗ್ಯ ಇತ್ತು.

ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಸ್ವಾಮಿ ವಿವೇಕಾನಂದ ಸೇನೆ ಹಾಗೂ ಗಜಾನನ ಮಹಾಮಂಡಳದವರು ಸಿದ್ಧೇಶ್ವರ ದೇವಸ್ಥಾನದ ಎದುರು ಸಮಾರಂಭ ನಡೆಸಿದರೆ, ಶಾಸಕ ಅಪ್ಪು ಪಟ್ಟಣಶೆಟ್ಟಿ ನೇತೃತ್ವದ ಗಣೇಶೋತ್ಸವ ಮಹಾಮಂಡಳದವರು ಗಾಂಧಿ ಚೌಕ್‌ನಲ್ಲಿ ಸಭೆ ನಡೆಸಿದರು.

ವಿವಿಧ ಬಡಾವಣೆಗಳಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಗಣೇಶ ಮೂರ್ತಿಯೊಂದಿಗೆ ಮೆರವಣಿಗೆಯಲ್ಲಿ ಆಗಮಿಸುತ್ತಿದ್ದಂತೆ ಈ ಮಂಡಳಿಯವರು ಅವರನ್ನು ಸ್ವಾಗತಿಸುತ್ತಿದ್ದರು. ಆ ಮಂಡಳಿಯ ಅಧ್ಯಕ್ಷರನ್ನು ಸನ್ಮಾನಿಸಿ ಬೀಳ್ಕೊಡುತ್ತಿದ್ದರು.

ರಾತ್ರಿ 8 ಗಂಟೆಗೆ ಆರಂಭವಾದ ಈ ಸನ್ಮಾನ ಕಾರ್ಯಕ್ರಮ ಮಧ್ಯರಾತ್ರಿಯವರೆಗೂ ನಡೆಯಿತು.
ಗಣೇಶೋತ್ಸವದ ಸನ್ಮಾನ ಕಾರ್ಯಕ್ರಮ ಉಭಯ ಮುಖಂಡರ ಜಿದ್ದಾಜಿದ್ದಿ ರಾಜಕೀಯ ಕಣವಾಗಿಯೂ ಮಾರ್ಪಟ್ಟಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಗಾಂಧಿಚೌಕ್‌ನಲ್ಲಿ ನಡೆದ ಸಮಾರಂಭದಲ್ಲಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಭೀಮಾಶಂಕರ ಹದನೂರ, ಎಸ್ಪಿ ಡಾ.ಡಿ.ಸಿ. ರಾಜಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಸಿದ್ಧೇಶ್ವರ ದೇವಸ್ಥಾನದ ಎದುರು ನಡೆದ ಸಮಾರಂಭದಲ್ಲಿ ಶ್ರೀಶೈಲ ಗಚ್ಚಿನಮಠ, ಬಸಯ್ಯ ಹಿರೇಮಠ, ರಾಘು ಅಣ್ಣಿಗೇರಿ ಇತರರು ಪಾಲ್ಗೊಂಡಿದ್ದರು.

ಅದ್ದೂರಿ ಮೆರವಣಿಗೆ: ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಗಣೇಶ ಮೂರ್ತಿ ಎದುರು ಇಟ್ಟಿದ್ದ ಹಣ್ಣು-ಹಂಪಲು, ಗಣೇಶನಿಗೆ ತೊಡಿಸಿದ್ದ ಆಭರಣ, ಪೂಜಾ ಸಾಮಗ್ರಿಗಳನ್ನು ಭಕ್ತರಿಗೆ ಹರಾಜು ಮೂಲಕ ನೀಡಿ ಗಣೇಶೋತ್ಸವ ಮೆರವಣಿಗೆ ಆರಂಭಿಸಿದರು.

ಬ್ರಾಸ್ ಬ್ಯಾಂಡ್, ಡಾಲ್ಬಿ, ಬ್ಯಾಂಜೋ ಹಾಗೂ ಧ್ವನಿವರ್ಧಕಗಳ ಭರಾಟೆ ಹೆಚ್ಚಿತ್ತು. ಹಾಡಿಗೆ ತಕ್ಕಂತೆ ಯುವಕರು ಮೆರವಣಿಗೆಯುದ್ದಕ್ಕೂ ಕುಣಿದು ಕುಪ್ಪಳಿಸುತ್ತಿದ್ದರು. ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸುತ್ತಿದ್ದರು. `ಗಣಪತಿ ಬಪ್ಪಾ ಮೋರಯಾ...~ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಗಣೇಶ ವಿಗ್ರಹಗಳನ್ನು ಇಲ್ಲಿಯ ತಾಜಬಾವಡಿ, ಚಂದಾಬಾವಡಿಗಳಲ್ಲಿ ವಿಸರ್ಜಿಸಲಾಯಿತು.

ಅನ್ನ ಸಂತರ್ಪಣೆ: ವಿಜಾಪುರದ ಜೋಳದ ಬಜಾರ ರಸ್ತೆಯ ಶಂಕರ ಗಜಾನನ ಉತ್ಸವ ಸಮಿತಿಯಿಂದ ಗಣೇಶೋತ್ಸವದ ಅಂಗವಾಗಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಶಾಸಕ ಅಪ್ಪು ಪಟ್ಟಣಶೆಟ್ಟಿ, ಉತ್ಸವ ಸಮಿತಿಯ ಅಧ್ಯಕ್ಷ ಪೀರಾ ರೋಜಿನದಾರ, ಮಹಾದೇವ ಹಲಕುಡೆ, ಮಹಾದೇವ ಪಾಟೀಲ, ಆರ್.ಕೆ. ಸುರಪುರ, ಜೆ.ಡಿ. ರಜಪೂತ, ದೀಪಕ ಶಿಂತ್ರೆ, ಉಮೇಶ ವಂದಾಲ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT