ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಾಪುರ: ಹೆಚ್ಚಿದ ಕುಡಿಯುವ ನೀರಿನ ಹಾಹಾಕಾರ

Last Updated 1 ಅಕ್ಟೋಬರ್ 2012, 4:50 IST
ಅಕ್ಷರ ಗಾತ್ರ

ವಿಜಾಪುರ: ನಗರದಲ್ಲಿ ಮತ್ತೆ ನೀರಿನ ಹಾಹಾಕಾರ ಹೆಚ್ಚಿದೆ. ನೀರು ಪೂರೈಕೆ ಅವಧಿ ಹತ್ತು ದಿನ ಮಿಕ್ಕಿದೆ. ಕೊಡ ನೀರಿಗಾಗಿ ಜನ ಪರಿತಪಿಸುತ್ತ ಅಧಿಕಾರಿಗಳು-ರಾಜಕಾರಣಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

`ವಿಜಾಪುರ ನಗರಕ್ಕೆ ನೀರು ಪೂರೈಕೆಯ ಮೂಲವಾಗಿರುವ ಆಲಮಟ್ಟಿ ಜಲಾಶಯ ಭರ್ತಿಯಾಗಿದೆ.  ಆದರೂ ನಗರಕ್ಕೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಇಲ್ಲಿಯವರೆಗೆ ಜಲಾಶಯದಲ್ಲಿ ನೀರು ಕಡಿವೆು ಇದೆ ಎನ್ನುತ್ತಿದ್ದರು. ಈಗ ಜಲಾಶಯ ಭರ್ತಿಯಾಗಿದ್ದರೂ ಬೇಸಿಗೆಯಲ್ಲಿ ಕೊಟ್ಟಷ್ಟೂ ನೀರು ಕೊಡುತ್ತಿಲ್ಲ~ ಎಂದು ಜನ ದೂರುತ್ತಿದ್ದಾರೆ.

ತೊರವಿ, ನಾಲ್ಕಾರು ತಾಂಡಾಗಳು ಸೇರಿದಂತೆ ವಿಜಾಪುರ ನಗರದ ಜನಸಂಖ್ಯೆ ಈಗ ಅಂದಾಜು 3.80 ಲಕ್ಷ. ನಗರದಲ್ಲಿ ಇರುವ ನಳಗಳ ಸಂಪರ್ಕ ಸಂಖ್ಯೆ 38,600. ಇಷ್ಟು ಜನತೆಗೆ ನೀರು ಪೂರೈಸಲು ನಿತ್ಯ 40ರಿಂದ 45 ದಶಲಕ್ಷ ಲೀಟರ್ (ಎಂಎಲ್‌ಡಿ) ನೀರಿನ ಅಗತ್ಯವಿದೆ. ಅದಕ್ಕಾಗಿ ಕೊಲ್ಹಾರದಿಂದ ಎರಡು ಪ್ರತ್ಯೇಕ ಯೋಜನೆಗಳೂ ಇವೆ.

`ಭೂತನಾಳ ಕೆರೆ ಬತ್ತಿದೆ. ಕೊಲ್ಹಾರ ಯೋಜನೆಗಳಿಂದಲೇ ನೀರು ಪೂರೈಸಲಾಗುತ್ತಿದೆ. ವಿದ್ಯುತ್ ಸಮಸ್ಯೆ ಹೆಚ್ಚಿದ್ದರಿಂದ ನೀರು ಪೂರೈಕೆಯಲ್ಲಿ ವಿಳಂಬವಾಗುತ್ತಿದೆ~ ಎಂದು ಜಲಮಂಡಳಿ ಅಧಿಕಾರಿಗಳು ಹೇಳುತ್ತಿದ್ದಾರೆ.

`ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗೂ ಸೂಚನೆ ನೀಡಿದ್ದಾರೆ. 3.80 ಲಕ್ಷ ಜನಸಂಖ್ಯೆ ಹೊಂದಿರುವ ವಿಜಾಪುರ ನಗರದ ಕುಡಿಯುವ ನೀರಿನ ಯೋಜನೆಗೆ ಪ್ರತ್ಯೇಕ ವಿದ್ಯುತ್ ಲೈನ್ ಹಾಕಲಾಗಿದೆ.

ನಿರ್ವಹಣೆಗೆ ಕೋಟ್ಯಂತರ ರೂಪಾಯಿ ವೆಚ್ಚಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿಯವರು ಜನರೇಟರ್ ವ್ಯವಸ್ಥೆ ಮಾಡಿಕೊಂಡಿರುವಾಗ ಜಲಮಂಡಳಿಯವರಿಗೆ ಏನು ಸಮಸ್ಯೆ~ ಎಂಬುದು ನಗರದ ನಿವಾಸಿ ಚನ್ನಪ್ಪ ಕೊಪ್ಪದ, ಜಾವನಗೌಡ ಪಾಟೀಲ, ಚಿದಾನಂದ ಸಜ್ಜನ ಮತ್ತಿತರರ ಪ್ರಶ್ನೆ.

`ವಿಜಾಪುರ ನಗರಕ್ಕೆ ನೀರು ಪೂರೈಸುವ ಯೋಜನೆಯ ಮಲಘಾಣ ಘಟಕಕ್ಕೆ ಕಳೆದ 28ರಂದು ಕೆಲಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಹೀಗಾಗಿ ನಗರದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ~ ಎಂದು ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆ ನೀಡಿದ್ದಾರೆ.

ಆದರೆ, ಎಷ್ಟು ದಿನ ನೀರಿನ ವ್ಯತ್ಯಯವಾಗುತ್ತದೆ? ನೀರು ಪೂರೈಕೆಯ ಅವಧಿಯಲ್ಲಿ ಏಕೆ ಇಷ್ಟೆಲ್ಲ ವ್ಯತ್ಯಾಸವಾಗಿದೆ ಎಂಬ ಬಗ್ಗೆ ಅವರು ಮಾಹಿತಿ ನೀಡಿಲ್ಲ.

`ನಮ್ಮ ಪ್ರದೇಶದಕ್ಕೆ ಹತ್ತು ದಿನಗಳ ನಂತರ ನೀರು ಪೂರೈಸಿದರು. ಅದೂ ಅರ್ಧಗಂಟೆ ಮಾತ್ರ. ಕುಡಿಯುವ ನೀರು ತುಂಬಿಕೊಳ್ಳಲೂ ಆಗಲಿಲ್ಲ. ಕೊಡ ಹಿಡಿದುಕೊಂಡ ಬೋರ್‌ವೆಲ್‌ಗಳಿಗೆ ಅಲೆಯುತ್ತಿದ್ದೇವೆ. ಗಣಪತಿ ನೋಡಲು ಪುಣೆಗೆ ಹೋಗಿರುವ ಶಾಸಕರು ನಗರದ ನೀರಿನ ಸಮಸ್ಯೆ ಅರಿಯಲು ನಮ್ಮ ಓಣಿಗೂ ಬರಲಿ~ ಎಂಬುದು ನಗರದ ಕೆಲ ಬಡಾವಣೆಗಳ ಗೃಹಿಣಿಯರ ಮನವಿ.

ಡಿಸಿ ಭರವಸೆ:
`ವಿದ್ಯುತ್ ಸಮಸ್ಯೆಯಿಂದಾಗಿ ವಿಜಾಪುರ ನಗರದ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗಿರುವುದು ನಿಜ. ಕುಡಿಯುವ ನೀರು ಪೂರೈಕೆಗೆ ವಿದ್ಯುತ್ ಕಡಿತ ಮಾಡುವುದು ಬೇಡ ಎಂದು ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದೇನೆ~ ಎಂಬುದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಅವರ ವಿವರಣೆ.

`ಗ್ರಾಮ ಪಂಚಾಯಿತಿಗಳಿಗೆ ಜನರೇಟರ್ ವ್ಯವಸ್ಥೆ ಮಾಡಿಕೊಂಡಿದ್ದೇವೆ. ವಿಜಾಪುರ ನಗರದ ನೀರು ಪೂರೈಕೆ ಯೋಜನೆಗಾಗಿಯೇ ಪ್ರತ್ಯೇಕ ವಿದ್ಯುತ್ ಮಾರ್ಗವಿದೆ. ಆ ಮಾರ್ಗದಲ್ಲಿ ವಿದ್ಯುತ್ ಕಡಿತ ಆಗದಂತೆ ನೋಡಿ ಕೊಳ್ಳುತ್ತಿದ್ದೇವೆ. ನೀರು ಪೂರೈಕೆ ಘಟಕಗಳಿಗೆ ಕೇವಲ 15 ನಿಮಿಷ ವಿದ್ಯುತ್ ಪೂರೈಕೆ ಸ್ಥಗಿತಗೊಂಡರೂ ಆರು ಗಂಟೆಗಳಷ್ಟು ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ.

ಈ ವಿಷಯದಲ್ಲಿ ನಾನು ನಿರಂತರವಾಗಿ ಅಧಿಕಾರಿಗಳ ಸಂಪರ್ಕದಲ್ಲಿದ್ದೇನೆ. ಇನ್ನೆರಡು ದಿನಗಳಲ್ಲಿ ನಗರದ ನೀರಿನ ಸಮಸ್ಯೆ ಪರಿಹಾರವಾಗಬಹುದು~ ಎನ್ನುತ್ತಾರೆ ಅವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT