ವಿಜಾಪುರ: ನಗರದಲ್ಲಿ ಭಾನುವಾರ ಕೆಲಕಾಲ ಧಾರಾಕಾರವಾಗಿ ಸುರಿದ ಚಿತ್ತಿ ಮಳೆಯಿಂದ ತಗ್ಗು ಗುಂಡಿಗಳಿಂದ ತುಂಬಿದ ಇಲ್ಲಿನ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದವು.
ಇದರಿಂದ ಕೆಲಸ ಕಾರ್ಯಗಳಿಗಾಗಿ ತೆರಳಿದ ವಾಹನಗಳ ಸವಾರರು ತೀವ್ರ ತೊಂದರೆ ಅನುಭವಿಸಿದ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು.
ಮಧ್ಯಾಹ್ನ 3 ಗಂಟೆಗೆ ಸುಮಾರು ಅರ್ಧ ತಾಸು ಸುರಿದ ಬಿರುಗಾಳಿ ಮಿಶ್ರಿತ ಈ ಮಳೆಯ ಮಧ್ಯದಲ್ಲೂ ಹಲವು ಪಾದಚಾರಿಗಳು ತಮ್ಮ ಕೆಲಸ ಕಾರ್ಯಗಳಿಗೆ ರಸ್ತೆಯಲ್ಲಿ ಸಂಚರಿಸಿದರೆ, ವಾಹನಗಳ ಸವಾರರು ರಸ್ತೆ ಯಾವುದು, ತಗ್ಗು ಗುಂಡಿ ಯಾವುದು, ಎಂಬುದು ತಿಳಿಯದೇ ಮುಂದೆ ಸಾಗಲು ಹರಸಾಹಸ ಪಟ್ಟರು. ಬೀದಿ ಬದಿಯ ವ್ಯಾಪಾರಿಗಳು ಮಳೆಯ ತೊಂದರೆಯನ್ನು ಅನುಭವಿಸಿದರು.
ಇನ್ನು 2 ದಿನದಲ್ಲಿ ಈ ಚಿತ್ತಿ ಮಳೆಯ ಅವಧಿ ಮುಗಿಯಲಿದ್ದು, 23ರಿಂದ ಸ್ವಾತಿ ಮಳೆಯು ಭರವಸೆಯ ಮಳೆಯಾಗಿ ಸುರಿದರೆ ಹಿಂಗಾರಿ ಬೆಳೆಗಳಾದ ಜೋಳ, ಗೋಧಿ, ಕಡಲೆ ಇನ್ನಿತರ ಬೆಳೆಗಳಿಗೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಜಿಲ್ಲೆಯ ರೈತರು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.