ಬೆಂಗಳೂರು: ವಿಜಾಪುರ ನಗರದಲ್ಲಿ ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಸೈಕ್ಲಿಂಗ್ ಟ್ರ್ಯಾಕ್ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ತಿಳಿಸಿದರು.
ಬುಧವಾರ ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಎರಡು ತಿಂಗಳಲ್ಲಿ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ವರ್ಷದೊಳಗೆ ಕಾಮಗಾರಿ ಮುಗಿಸಲಾಗುವುದು. ಇದಲ್ಲದೇ ಸೈಕ್ಲಿಂಗ್ ಪಟುಗಳಿಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ವತಿಯಿಂದ 40 ಬೈಸಿಕಲ್ಗಳನ್ನು ವಿತರಿಸಲಾಗುವುದು’ ಎಂದರು.
ಬಜೆಟ್ನಲ್ಲಿ ಇಲಾಖೆಗೆ ದೊರೆಯುವ ಅನುದಾನದ ಮೊತ್ತ ತುಂಬಾ ಕಡಿಮೆ. ಈ ವರ್ಷ ರೂ. 126ಕೋಟಿ ಅನುದಾನ ದೊರೆತಿದೆ. ಅದರಲ್ಲೇ ಎಲ್ಲವನ್ನೂ ಮಾಡಬೇಕಾಗುತ್ತದೆ ಎಂದರು.
ತಮ್ಮ ಪುತ್ರನಿಗೆ ಅಮೆರಿಕದಲ್ಲಿ ತರಬೇತಿ ಕೊಡಿಸಲು ರೂ. 2 ಕೋಟಿ ನೆರವು ನೀಡುವಂತೆ ಅಥ್ಲೀಟ್ ವಿಕಾಸ್ ಗೌಡ ಅವರ ತಂದೆ ಮನವಿ ಮಾಡಿರುವ ಬಗ್ಗೆ ಕೇಳಿದಾಗ, ‘ಅವರಿಗೆ ಅಷ್ಟೊಂದು ದೊಡ್ಡ ಮೊತ್ತದ ನೆರವು ನೀಡಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದರು.