ಕೊಳ್ಳೇಗಾಲ: ಮಲೆ ಮಹದೇಶ್ವರಸ್ವಾಮಿ ರಥೋತ್ಸ ವವು ಬುಧವಾರ ವಿಜೃಂಭಣೆಯಿಂದ ಜರುಗಿತು.
ಸಾಲೂರು ಬೃಹ್ಮನಠದ ಇಮ್ಮಡಿ ಮಹದೇವ ಸ್ವಾಮೀಜಿ, ಖರವೀರಸ್ವಾಮೀಜಿ ಹಾಗೂ ಗುರುಸ್ವಾಮೀಜಿ ಮಹದೇಶ್ವರ ಉತ್ಸವ ಮೂರ್ತಿಗೆ ಬೆಳಿಗ್ಗೆ ಪೂಜೆ ಸಲ್ಲಿಸಿದರು.
ಬಳಿಕ ಮಹದೇಶ್ವರ ಮೂರ್ತಿಯನ್ನು ಉಪಆಗಮಿಕ ಎಂ.ಪ್ರಸಾದ್, ಮಾದೇಶ, ದುಮ್ಮಾದ ಅವರು ರಥದಲ್ಲಿ ಪ್ರತಿಷ್ಠಾಪಿಸಿದರು. ದೇವಾಲಯದ ಅರ್ಚರಾದ ಪುಟ್ಟಸ್ವಾಮಿ, ಮಾದಯ್ಯ, ಚಿಕ್ಕವೀರತಮ್ಮಡಿ, ಯಜಮಾನ ಪುಟ್ಟಣ್ಣ, ಪುಟ್ಟಯ್ಯ, ದೇವಾಲಯದ ವಿಶೇಷ ಆಡಳಿತಾಧಿಕಾರಿ ಜಯವಿಭವಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ವಿ. ದಾವಣಗೇರಿ ಹಾಗೂ ಪೊಲೀಸ್ ಅಧಿಕಾರಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ರಾತ್ರಿಯಿಂದಲೇ ಮಹದೇಶ್ವರಬೆಟ್ಟದಲ್ಲಿ ಜಮಾಯಿಸಿದ್ದ ಲಕ್ಷಾಂತರ ಭಕ್ತರು ಹಣ್ಣು, ಜವನ ಎಸೆದು, ತೆಂಗಿನಕಾಯಿ ಒಡೆದರು.
ಪುಷ್ಪಾಲಂಕೃತ ನಂದಿ ಕಂಬ, ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪ, ಸತ್ತಿಗೆ ಸೂರಿಪಾನಿಗಳು, ದೇವರಗುಡ್ಡರ ಕುಣಿತ ಮೇಳದೊಡನೆ ಸಂಚರಿಸಿದ ರಥವು ಸ್ವಸ್ಥಾನ ಸೇರಿತು.
ವಿಶೇಷ ದರ್ಶನ: ಭಕ್ತಾಧಿಗಳ ಅನುಕೂಲಕ್ಕಾಗಿ ದೇವಸ್ಥಾನದ ಆಡಳಿತ ಮಂಡಳಿ ಅಭಿಷೇಕ ವೀಕ್ಷಿಸಲು ವಿವಿಧೆಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿತ್ತು.
ಇದೇ ಪ್ರಥಮ ಬಾರಿಗೆ 4 ಪ್ರತ್ಯೇಕ ಕಡೆಗಳಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗಕ್ಕೆ ಅವಕಾಶ ಮಾಡಲಾಗಿತ್ತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಭಕ್ತರ ಮನತಣಿಸಿದವು.
ದೇವಾಲಯದಲ್ಲಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದ 90 ಸಾವಿರ ಭಕ್ತರಿಗೆ ಉಚಿತ ಲಾಡು ವಿತರಿಸಲಾಯಿತು.