ಕುಷ್ಟಗಿ: ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಅಂಗವಾಗಿ ಮಂಗಳವಾರ ಪಟ್ಟಣದಲ್ಲಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನೆರವೇರಿತು.
ವಿವಿಧ ಗ್ರಾಮಗಳಿಂದ ಬಂದಿದ್ದ ನೂರಾರು ಮಹಿಳೆಯರು ಬಿಸಿಲನ್ನು ಲೆಕ್ಕಿಸದೇ ಕುಂಭಕಲಶದೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ವಿವಿಧ ಗ್ರಾಮಗಳಿಗೆ ಸೇರಿದ ಜನಪದ ಕಲಾವಿದರ ಡೊಳ್ಳು ಕುಣಿತ, ಬಾಂಜ್ ಮೇಳ ಮೆರವಣಿಗೆಗೆ ಮೆರಗು ನೀಡಿತು. ಅಲಂಕೃತ ವಾಹನದಲ್ಲಿದ್ದ ವಾಲ್ಮೀಕಿ, ರಾಮ, ಲಕ್ಷ್ಮಣರ ವೇಷಧಾರಿ ಮಕ್ಕಳು ಗಮನ ಸೆಳೆದರು.
ಮಾಜಿ ಶಾಸಕರಾದ ಕೆ.ಶರಣಪ್ಪ, ಹಸನ್ಸಾಬ್ ದೋಟಿಹಾಳ, ದೊಡ್ಡನಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಾಲತಿ ನಾಯಕ್, ಸದಸ್ಯೆಯರಾದ ಅನ್ನಪೂರ್ಣಮ್ಮ ವಾಲ್ಮೀಕಿ, ಹನುಮಕ್ಕ ಚೌಡ್ಕಿ, ಪುರಸಭೆ ಅಧ್ಯಕ್ಷೆ ಮೋದಿನಬಿ ಮುಲ್ಲಾ, ಉಪಾಧ್ಯಕ್ಷೆ ರೂಪಾ ಕೊನಸಾಗರ, ಸದಸ್ಯೆ ತೋಟಮ್ಮ ಕಲಕಬಂಡಿ, ತಹಸೀಲ್ದಾರ ವೀರೇಶ ಬಿರಾದಾರ, ತಾಲ್ಲೂಕು ಪಂಚಾಯಿತಿ ಇ.ಒ ಜಯರಾಮ ಚವ್ಹಾಣ, ಮುಖ್ಯಾಧಿಕಾರಿ ವಿಠ್ಠಲ ಲಾಟ್ನಿ, ಸಿಪಿಐ ನೀಲಪ್ಪ ಓಲೇಕಾರ, ಪಿಎಸ್ಐ ನಾರಾಯಣ ದಂಡಿನ, ಹನಮಂತಪ್ಪ ಚೌಡ್ಕಿ, ಸಮಾಜದ ಮುಖಂಡ ಕಂದಕೂರಪ್ಪ ವಾಲ್ಮೀಕಿ ಮತ್ತಿತರರು ಭಾಗವಹಿಸಿದ್ದರು.