ಹುಬ್ಬಳ್ಳಿ: ಸಿದ್ಧಾರೂಢ ಸ್ವಾಮಿ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಸದ್ಗುರು ಸಿದ್ಧಾರೂಢ ಸ್ವಾಮೀಜಿ 175ನೇ ಜಯಂತ್ಯುತ್ಸವ ಹಾಗೂ ಗುರುನಾಥಾರೂಢ ಸ್ವಾಮೀಜಿ ಜನ್ಮ ಶತಮಾನೋತ್ಸವ ಕಾರ್ಯಕ್ರಮವೂ ಈ ಬಾರಿ ನಡೆದ ಪರಿಣಾಮ ಭಕ್ತರ ಸಂಖ್ಯೆ ಪ್ರತಿ ವರ್ಷಕ್ಕಿಂತಲೂ ಹೆಚ್ಚಾಗಿತ್ತು.
ತೇರು ಎಳೆಯುವ ಮುನ್ನ ನಡೆದ ಪೂಜೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಡಾ. ಕೆ. ರಾಮಚಂದ್ರ ರಾವ್, ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ, ನಟ ರಮೇಶ ಅರವಿಂದ, ಸಿದ್ಧಾರೂಢಮಠದ ಟ್ರಸ್ಟ್ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.
ಪಲ್ಲಕ್ಕಿ ಮೆರವಣಿಗೆ: ಸಿದ್ಧಾರೂಢರ ಹಾಗೂ ಗುರುನಾಥಾರೂಢರ ಮೂರ್ತಿಗಳನ್ನು ಹೊತ್ತ ಪಲ್ಲಕ್ಕಿ ಮೆರವಣಿಗೆ ಮಧ್ಯಾಹ್ನ ಮಠದಿಂದ ಆರಂಭಗೊಂಡಿತು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಜೆ 5.20ಕ್ಕೆ ಮಠಕ್ಕೆ ಆಗಮಿಸಿತು. ನಂತರ ಪೂಜಾ ವಿಧಿಗಳನ್ನು ಪೂರೈಸಿದ ನಂತರ ರಥೋತ್ಸವ ನಡೆಯಿತು.
ರಾಜ್ಯದಾದ್ಯಂತ ಅಲ್ಲದೇ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಮೊದಲಾದ ಕಡೆಯಿಂದಲೂ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.