ಚನ್ನಪಟ್ಟಣ: ವಿಜ್ಞಾನದ ಆವಿಷ್ಕಾರದಿಂದ ವಿದ್ಯಾಕ್ಷೇತ್ರದಲ್ಲಿ ಗಣನೀಯ ಪ್ರಗತಿಯಾಗುತ್ತಿದ್ದು ಇದನ್ನು ಇಂದಿನ ಯುವ ಪೀಳಿಗೆ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಮಹತ್ವವಾದುದನ್ನು ಸಾಧಿಸಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದ್ದಾರೆ.ಕಣ್ವ-ಅರ್ಕಾವತಿ ಟ್ರಸ್ಟ್, ಚನ್ನಾಂಬಿಕ ಸಮೂಹ ಸಂಸ್ಥೆಗಳು ವಂದಾರಗುಪ್ಪೆಯ ಆಕ್ಸ್ಫರ್ಡ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಆರಂಭಿಸಿರುವ ಎಜುಕಾಮ್ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಜ್ಞಾನ ಬೆಳೆದಂತೆಲ್ಲ ಸ್ಪರ್ಧೆಗಳು ಹೆಚ್ಚುತ್ತಿವೆ. ಇದರ ಗುಂಗಿನಲ್ಲಿ ಓದುವ ಹಾಗೂ ಹಾಗೂ ಬರೆಯುವ ಹವ್ಯಾಸ ಕ್ಷೀಣಿಸುತ್ತಿದೆ ಎಂದು ಅವರು ತಿಳಿಸಿದರು.ಎಜುಕಾಮ್ ಸ್ಮಾರ್ಟ್ ತರಗತಿಯಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚು ಜ್ಞಾನಾಭಿವೃದ್ಧಿಯಾಗಲಿದೆ. ಈ ತಂತ್ರಗಾರಿಕೆಯನ್ನು ತಾಲ್ಲೂಕಿನ ಇತರ ಪ್ರೌಢಶಾಲೆಗಳು ಅಳವಡಿಸಿಕೊಳ್ಳಬೇಕೆಂದು ಅವರು ಹೇಳಿದರು.
ಉದ್ಘಾಟನೆ ನೆರವೇರಿಸಿದ ನಿಸರ್ಗ ಸಾಂಸ್ಕೃತಿಕ ಸ್ನೇಹ ಬಳಗದ ಅಧ್ಯಕ್ಷ ಎಂ. ಶಿವಮಾದು ನೂತನ ತಂತ್ರಗಾರಿಕೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸುವುದು ಪ್ರಗತಿಯ ಸಂಕೇತವಾಗಿದೆ ಎಂದರು.
ಜೆಡಿಎಸ್ ಮುಖಂಡ ಬೋರ್ವೆಲ್ ರಾಮಚಂದ್ರು ಮಾತನಾಡಿ ನಾಗಾಲೋಟದ ಯುಗದಲ್ಲಿ ಅದೇ ವೇಗದಲ್ಲಿ ಮುನ್ನುಗ್ಗುವ ಛಲಗಾರಿಕೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಯಶಸ್ವಿಯಾಗಬೇಕೆಂದು ಹೇಳಿದರು.ವೇದಿಕೆಯಲ್ಲಿ ಎಜುಕಾಮ್ನ ಪ್ರದೇಶಿಕ ಮುಖ್ಯಸ್ಥರಾದ ಸುಮಿತ್ ಮರ್ವಾ, ವಿನೋದ್, ಪ್ರಾಂಶುಪಾಲ ವನರಾಜು, ಮೆಹಬೂಬ್, ರಾಮಸ್ವಾಮಿ, ಜೆಡಿಎಸ್ ಮುಖಂಡ ನಾಗವಾರ ರಂಗಸ್ವಾಮಿ ಉಪಸ್ಥಿತರಿದ್ದರು.