ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಬೆಳಕಿಗೊಂದು ಶಿಬಿರ

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಪರೀಕ್ಷೆಗಷ್ಟೇ ಪಾಠ' ಇಂದಿನ ಬಹುತೇಕ ಶಾಲೆಗಳ ಮೂಲಮಂತ್ರ. ಆದರೆ ಮಕ್ಕಳಿಗೆ ಪಾಠಕ್ಕೂ ಮೀರಿ ಅಗತ್ಯವಾದ ವಿಶೇಷ ಜ್ಞಾನವೂ ಬೇಕು ಎಂಬುದನ್ನು ಮನವರಿಕೆ ಮಾಡಿಕೊಂಡಿದೆ ಬಸವನಗುಡಿಯ ನ್ಯಾಷನಲ್ ಕಾಲೇಜು.

ಈ ಜ್ಞಾನ ಸಂಪಾದನೆ ಸಾಧ್ಯವಾಗುವುದು ವಿಜ್ಞಾನದಿಂದ ಎಂಬ ಉದ್ದೇಶದಿಂದ ಆರಂಭಿಸಿದ್ದು `ಬೆಂಗಳೂರು ವಿಜ್ಞಾನ ವೇದಿಕೆ'. ಇಂದಿಗೂ ಅದೇ ಛಾಪನ್ನು ಉಳಿಸಿಕೊಂಡು ಸಾಗುತ್ತಿರುವ ವೇದಿಕೆ ಈ ಬಾರಿಯೂ ಅಂತಹ ವಿಜ್ಞಾನ ಸರಮಾಲೆಯನ್ನು ತಿಂಗಳ ಕಾರ್ಯಕ್ರಮ ಮತ್ತು ಬೇಸಿಗೆ ಶಿಬಿರದ ಮೂಲಕ ಮಕ್ಕಳಿಗೆ ಪಸರಿಸಲಿದೆ.

ಪ್ರತಿ ತಿಂಗಳೂ ಕಾಲೇಜಿನಲ್ಲಿ ಒಂದಿಲ್ಲೊಂದು ವಿಜ್ಞಾನ ಸಂಬಂಧಿ ಚಟುವಟಿಕೆ ಇದ್ದೇ ಇರುತ್ತದೆ. ಅದರಂತೆ ಈ ಏಪ್ರಿಲ್‌ನಲ್ಲೂ ವಿಶೇಷ ಉಪನ್ಯಾಸಗಳನ್ನು ಸಂಸ್ಥೆ ಆಯೋಜಿಸಿದೆ.

ಏಪ್ರಿಲ್ 3ರಂದು ಭಾರತೀಯ ವಾಯು ಪಡೆಯ ಜಿ.ಬಿ. ಅತ್ರಿ, ಭಾರತೀಯ ವಾಯು ಪಡೆಯಲ್ಲಿನ ಆವಿಷ್ಕಾರ, ಆಗುಹೋಗುಗಳ ಕುರಿತು ಮಾತನಾಡಲಿದ್ದಾರೆ. `ಆ್ಯನ್ ಅಡ್ವೆಂಚರ್ ಆಫ್ ಇಂಡಿಯನ್ ಏರ್‌ಫೋರ್ಸ್ ವಿತ್ ಎ ಕರಿಯರ್' ಎಂಬುದು ಅವರ ಉಪನ್ಯಾಸದ ತಿರುಳು.

ಇನ್ನು ಪ್ರಾಣಿ ಸಂಕುಲದ ಬಗ್ಗೆ ಆಸಕ್ತಿ ಇರುವವರಿಗೆ ಏಪ್ರಿಲ್ 4ರಂದು ಹಾವುಗಳ ಕುರಿತು ವಿಶೇಷ ಸ್ಲೈಡ್ ಶೋ ಏರ್ಪಡಿಸಲಾಗಿದೆ. ಇದರ ಬಗ್ಗೆ  ಪರಿಸರವಾದಿ ಎಸ್. ಅಜಯ್ ಪ್ರಭು, `ಕಾಮನ್ ಸ್ನೇಕ್ಸ್ ಆಫ್ ಬ್ಯಾಂಗಲೊರ್; ಆರ್ ದೇ ಡಿಸಪಿಯರಿಂಗ್?' ಎಂಬ ಶೀರ್ಷಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಏಪ್ರಿಲ್ 17ರಂದು ಬೆಂಗಳೂರು ವಿವಿ ಕುಲಪತಿ ಡಾ. ಬಿ. ತಿಮ್ಮೇಗೌಡ ಅವರು ರಸಾಯನಶಾಸ್ತ್ರದ ವಿವಿಧ ಮಜಲುಗಳನ್ನು ಪರಿಚಯಿಸಿಕೊಡಲಿದ್ದು, `ಇಂಪಾರ್ಟೆಂಟ್ ಮೈಲ್‌ಸ್ಟೋನ್ಸ್ ಇನ್ ದಿ ಫೀಲ್ಡ್ ಆಫ್ ಕೆಮಿಸ್ಟ್ರಿ' ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಿದ್ದಾರೆ. ಇದು 2500ನೇ ಉಪನ್ಯಾಸ ಎಂಬುದು ಸಂಸ್ಥೆಯ ಅಗ್ಗಳಿಕೆ.

ಏಪ್ರಿಲ್ 24ರಂದು ಆರ್.ವಿ. ದಂತವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಆರ್. ದಿನೇಶ್ ದಂತವೈದ್ಯಕೀಯದಲ್ಲಿನ ವಿದ್ಯಮಾನಗಳ ಕುರಿತು `ಕಾಂಟೆಂಪೊರರಿ ಡೆಂಟಿಸ್ಟ್ರಿ' ಉಪನ್ಯಾಸ ನೀಡುತ್ತಾರೆ.

ಕೇವಲ ಉಪನ್ಯಾಸ ಮಾತ್ರವಲ್ಲದೆ ಸಂವಾದ ಮತ್ತು ಸಿನಿಮಾ ಪ್ರದರ್ಶನವೂ ಇಲ್ಲಿರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳೂ ಸಂಜೆ 6ರಿಂದ ಡಾ. ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ಬಸವನ ಗುಡಿ ನ್ಯಾಷನಲ್ ಕಾಲೇಜಿನಲ್ಲಿ ನಡೆಯುತ್ತವೆ.

ಬೇಸಿಗೆ ವಿಜ್ಞಾನ ಶಿಬಿರ
ಸತತ 45 ವರ್ಷಗಳಿಂದ ಬೇಸಿಗೆ ಶಿಬಿರ ನಡೆಸುತ್ತಾ ಬಂದಿರುವ ಕಾಲೇಜು, ಈ ಬಾರಿಯೂ ಅಂತಹ ಶಿಬಿರವನ್ನು ಹಮ್ಮಿಕೊಂಡಿದೆ. 8ನೇ ತರಗತಿ ಮಕ್ಕಳಿಗೆ ನಡೆಸುವ 23ನೇ ವಾರ್ಷಿಕ ಶಿಬಿರ ಇದಾಗಿದ್ದು, ಏಪ್ರಿಲ್ 4ರಿಂದ ಏಪ್ರಿಲ್ 21ರವರೆಗೆ ಶಿಬಿರ ನಡೆಯುತ್ತದೆ.
ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಏಪ್ರಿಲ್ 22ರಿಂದ ಆರಂಭಗೊಂಡು ಮೇ.11ರವರೆಗೂ ಶಿಬಿರ ಮುಂದುವರೆಯಲಿದ್ದು, ಬರೋಬ್ಬರಿ 46ನೇ ವಾರ್ಷಿಕ ಶಿಬಿರ ಇದಾಗಿದೆ. ವಿಜ್ಞಾನದ ಬಗ್ಗೆ ಕುತೂಹಲವಿರುವ ಮಕ್ಕಳಿಗೆ ಉತ್ತಮ ಅವಕಾಶ ಇದಾಗಿದ್ದು, ವೈಜ್ಞಾನಿಕ ಸಂಶೋಧನೆ, ತಂತ್ರಜ್ಞಾನದ ಆವಿಷ್ಕಾರ, ಹೀಗೆ ಹಲವು ವಿಚಾರಗಳು ಮಕ್ಕಳಲ್ಲಿ ಚಿಂತನೆಗೆ ಎಡೆಮಾಡಿಕೊಡಲಿದೆ.

ಬೆಳಿಗ್ಗೆ 8.30ರಿಂದ 11.30ರವರೆಗೆ ನಡೆಯುವ ತರಗತಿಗಳಲ್ಲಿ ಉಪನ್ಯಾಸಗಳೊಂದಿಗೆ ವೈಜ್ಞಾನಿಕ ಸಾಕ್ಷ್ಯ ಚಿತ್ರಗಳು, ವೈಜ್ಞಾನಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವೂ ಮಕ್ಕಳಿಗಿದೆ.

ಬೇಸಿಗೆ ಶಿಬಿರವನ್ನು ಏಪ್ರಿಲ್ 4ರಂದು ಬೆಳಿಗ್ಗೆ 10ಕ್ಕೆ ಭೂವಿಜ್ಞಾನಿ ಮತ್ತು ವೈಜ್ಞಾನಿಕ ಬರಹಗಾರ ಪ್ರೊ. ಟಿ. ಆರ್. ಅನಂತರಾಮು ಅವರು ಉದ್ಘಾಟಿಸಲಿದ್ದಾರೆ. ಬೆಂಗಳೂರು ವಿಜ್ಞಾನ ವೇದಿಕೆ ಅಧ್ಯಕ್ಷ ಪ್ರೊ. ಎ.ಎಚ್. ರಾಮರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.

ನಿಮ್ಹಾನ್ಸ್‌ನ ಡಾ. ಸಿ. ಆರ್. ಚಂದ್ರ ಶೇಖರ್, ನ್ಯಾಷನಲ್ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎಸ್. ಬಾಲಚಂದ್ರರಾವ್, ಪ್ರೊ. ಬಿ.ಕೆ. ವಿಶ್ವನಾಥ್‌ರಾವ್, ಪ್ರೊ. ಎಚ್.ಆರ್. ರಾಮಕೃಷ್ಣ ರಾವ್, ಡಾ. ವೈ. ತುಳಜಪ್ಪ, ಒಟ್ಟು 23 ಮಂದಿ ಪರಿಣತರು ಉಪನ್ಯಾಸ ಕೈಗೊಳ್ಳಲಿದ್ದಾರೆ. ವಿಜ್ಞಾನದ ಹಲವು ಮಜಲುಗಳನ್ನು ತಿಳಿಯಲು ನಿಮಗೂ ಕುತೂಹಲವಿದ್ದರೆ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಶುಲ್ಕ ರೂ 250. ಸಂಪರ್ಕಕ್ಕೆ: 080-26674441/9900320532.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT