ಕುದೂರು (ಮಾಗಡಿ): ರಾಮನಗರದ ಸರ್ಕಾರಿ ಬಾಲಕ ಮತ್ತು ಬಾಲಕಿಯರ ಪಿ.ಯು ಕಾಲೇಜಿನಲ್ಲಿ ಇತ್ತೀಚೆಗೆ ನಾಲ್ಕು ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ವೈಜ್ಞಾನಿಕ ಅನ್ವೇಷಕ ಮಾದರಿಗಳ ಮೇಳದಲ್ಲಿ ಕುದೂರು ಮಹಂತೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿವೆ.
ತೊಗರಿ, ಟೊಮೆಟೊ, ಬದನೆಕಾಯಿ, ಬೆಂಡೆಕಾಯಿ, ಹುರುಳಿಯಂತಹ ವಾಣಿಜ್ಯ ಬೆಳೆಗಳಲ್ಲಿ ತಲೆದೋರುವ ಕಳೆಯನ್ನು ಹೇಗೆ ನಿಯಂತ್ರಿಸಬಹುದು ಎಂಬ ಮಾದರಿಯನ್ನು ವಿದ್ಯಾರ್ಥಿನಿ ಗುಣ ತಯಾರಿಸ್ದ್ದಿದಾರೆ. `ಸ್ವಯಂ ನಿಯಂತ್ರಣ ಬೀದಿ ದೀಪಗಳ ಮಾದರಿ'ಯನ್ನು ಭಾವನಾ ತಯಾರಿಸಿದ್ದರು. ಇವರೆಡೂ ಮಾದರಿಗಳು ತೀರ್ಪುಗಾರರ ಮೆಚ್ಚಗೆಗೆ ಪಾತ್ರವಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿವೆ.
ಗುಣ ಏಳನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಭಾವನಾ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ.
`ಪರಿಸರ ಸ್ನೇಹಿಯಾದ ಬೈಸಿಕಲ್ ಕಳೆ ನಿಯಂತ್ರಣ ಯಂತ್ರವು ರೈತರಿಗೆ ಕಡಿಮೆ ವೆಚ್ಚದಲ್ಲಿ ದೊರೆಯುವಂತಿದೆ. ಇದು ಕಳೆ ನಿಯಂತ್ರಣ ಮಾಡಿ ಹೆಚ್ಚು ಇಳುವರಿ ನೀಡುತ್ತದೆ. ಅಲ್ಲದೆ ಶ್ರಮವನ್ನು ಕಡಿಮೆ ಮಾಡಿ ರೈತರಿಗೆ ಆರ್ಥಿಕವಾಗಿ ನೆರವಾಗುತ್ತದೆ' ಎಂದು ಗುಣ ವಿವರಿಸಿದಳು.
ಮಾಗಡಿ ತಾಲ್ಲೂಕಿನ ಪೈಕಿ ಮಾದಿಗೊಂಡನ ಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಕೀರ್ತಿಕುಮಾರ್ ತಯಾರಿಸಿದ ಸುರುಳಿ ಸೌರ ಜಲತಾಪಕ ಯಂತ್ರ, ಮಂಚನಬೆಲೆ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಯ ಶಿಲ್ಪಾ ತಯಾರಿಸಿದ ಶಾಖೋತ್ಪನ್ನ ವಿದ್ಯುತ್ ತಯಾರಿಕಾ ಘಟಕ, ಶ್ರೀಗಿರಿಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ಲಿಫ್ಟ್ಗಳಿಂದ ವಿದ್ಯುತ್ ತಯಾರಿಸುವ ಮಾದರಿಗಳು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿವೆ.
ಅಭಿನಂದನೆ: ವಿಜ್ಞಾನ ಶಿಕ್ಷಕರಾದ ಲತಾ, ವಾಸುದೇವ್ ಮೂರ್ತಿ, ರಮೇಶ್ ಪಂಡಿತ್, ಪದ್ಮನಾಭ , ಸಿದ್ದಲಿಂಗ ಸ್ವಾಮಿ ಮಕ್ಕಳಿಗೆ ಮಾರ್ಗದರ್ಶಕರಾಗಿದ್ದರು. ಇವರನ್ನು ಕುದೂರು ಸಮೂಹ ಸಂಪನ್ಮೂಲ ಕೇಂದ್ರದ ಮುಖ್ಯಸ್ಥರಾದ ಉಮಾಶಂಕರ್ ಹಾಗೂ ಸೋಲೂರಿನ ಗದ್ದುಗೆ ಮಠದ ಮಹಂತೇಶ್ವರ ಸ್ವಾಮೀಜಿ, ವಿದ್ಯಾಸಂಸ್ಥೆಯಪ್ರಾಚಾರ್ಯ ಕಾಂತರಾಜು ಅಭಿನಂದಿಸಿದ್ದಾರೆ.