ವಿಜಾಪುರ: ಅರೆರೆ... ಅಲ್ನೋಡು, ರಾಕೆಟ್ ಉಡಾವಣೆಗೆ ಸಿದ್ಧವಾಗಿ ನಿಂತಿದೆ! ತಿರುಗುತ್ತಲೇ ಇರುವ ಭೂಮಂಡಲದ ಸುತ್ತ ಅದೆಷ್ಟು ಗ್ರಹಗಳು... ಗಾಳಿ ಯಂತ್ರದ ಮೂಲಕ ಹೇಗೆ ನೀರು ಎತ್ತುತ್ತಿದ್ದಾರೆ ನೋಡಲ್ಲಿ...
ಇಲ್ಲಿಯ ದರಬಾರ ಕಾಲೇಜಿನಲ್ಲಿ ಶುಕ್ರವಾರ ನೆರೆದಿದ್ದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ವಿಜ್ಞಾನ ಮಾದರಿ ಗಳನ್ನು ಕಂಡು ಹೀಗೆ ಚರ್ಚಿಸುತ್ತಿದ್ದರು. ಅವುಗಳ ರಚನೆ, ಕಾರ್ಯನಿರ್ವಹಣೆಯ ಬಗೆ, ಅದರಿಂದ ಆಗುವ ಪ್ರಯೋಜನದ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಮಾಹಿತಿಯಿಂದ ಸಂತೃಪ್ತರಾಗಿ ಮುಂದೆ ಸಾಗುತ್ತಿದ್ದರು.
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಮತ್ತು ತರಬೇತಿ ನಿರ್ದೇಶನಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಈ ಜಿಲ್ಲಾ ಮಟ್ಟದ ವಿಜ್ಞಾನ ಮಾದರಿಗಳ ಪ್ರದರ್ಶನಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಂಕ್ರುಬಾಯಿ ಚಲವಾದಿ ಚಾಲನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಪ್ಪು ಪಟ್ಟಣಶೆಟ್ಟಿ, ವಿಜ್ಞಾನ ಚಟುವಟಿಕೆಗಳು, ವೈಜ್ಞಾನಿಕ ಮನೋಭಾವ ಕೇವಲ ನಗರ ವಾಸಿಗಳಿಗೆ ಸೀಮಿತವಾಗಿರದೆ ಗ್ರಾಮೀಣ ರಿಗೂ ತಲುಪಿದಾಗ ಮಾತ್ರ ಅಪೇಕ್ಷಿತ ವೈಜ್ಞಾನಿಕ ಕ್ರಾಂತಿಯಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಭಾರತಕ್ಕಿರುವ ವಿಜ್ಞಾನ ಮತ್ತು ಸಂಶೋಧನೆಗಳ ಇತಿಹಾಸ ಜಗತ್ತಿನ ಯಾವ ರಾಷ್ಟ್ರಕ್ಕೂ ಇಲ್ಲ. ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಹೆಸರಾದ `ನಾಸಾ~ ದಲ್ಲಿನ ಅತ್ಯಂತ ಉತ್ತಮ ವಿಜ್ಞಾನಿಗಳು ಭಾರತೀಯರು ಎಂಬುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಇತ್ತೀಚಿನ ವಿದ್ಯಾರ್ಥಿಗಳಲ್ಲಿ ಎಂಜನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣದ ಬಗ್ಗೆ ಮೋಹ ಹೆಚ್ಚುತ್ತಿದೆ. ಮೂಲ ವಿಜ್ಞಾನದ ಬಗ್ಗೆ ವಿದ್ಯಾರ್ಥಿ ಗಳು ಒಲವು ಮೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳನ್ನು ಮೂಲ ವಿಜ್ಞಾನ ಗಳತ್ತ ಆಕರ್ಷಿಸುವ ಉದ್ದೇಶದಿಂದ ಕಾಲೇಜು ಪ್ರಾಧ್ಯಾಪಕರಿಗೆ ಅತ್ಯಂತ ಆಕರ್ಷಕವಾದ ಯು.ಜಿ.ಸಿ. ವೇತನ ಶ್ರೇಣಿಯನ್ನು ನೀಡಲಾಗಿದೆ ಎಂದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಾಜೇಶ ದರಬಾರ ಹಾಗೂ ಅವರ ಸಹೋದರ ಕಿಶೋರ ದರಬಾರ ಅವರು ತಮ್ಮ ತಂದೆ ದಿವಂಗತ ದ್ವಾರಕಾದಾಸ ದರಬಾರ ಅವರ ಸ್ಮರಣಾರ್ಥ, ಪ್ರತಿವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆ ಯಿಂದ ಜರುಗುವ ವಿಜ್ಞಾನ ಮಾದರಿ ಗಳ ಪ್ರದರ್ಶನದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ಕ್ರಮವಾಗಿ ರೂ.7 ಸಾವಿರ, ರೂ.5 ಸಾವಿರ, ರೂ.3ಸಾವಿರ ನಗದು ಬಹುಮಾನ ನೀಡುವುದಾಗಿ ಪ್ರಕಟಿಸಿದರು.
ಡಿಡಿಪಿಐ ಕಚೇರಿಯ ವಿಜ್ಞಾನ ವಿಷಯ ಪರಿವೀಕ್ಷಕ ಡಾ.ಅಶೋಕ ಲಿಮಕರ ಇತರರು ಪಾಲ್ಗೊಂಡಿದ್ದರು. ಪ್ರಭಾರಿ ಡಿಡಿಪಿಐ ಎಂ.ಎಂ. ಅಂಗಡಿ ಸ್ವಾಗತಿಸಿದರು. ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವೈ. ಕೊಣ್ಣೂರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.